ಖಾಸಗಿತನ ಬೇಕಂದ್ರೆ ವಾಟ್ಸ್ಆ್ಯಪ್ ಬಿಡಿ
Team Udayavani, Apr 29, 2017, 1:54 AM IST
ಹೊಸದಿಲ್ಲಿ: ಎಲ್ಲದಕ್ಕೂ ಆಧಾರ್ ಅನ್ನು ಕೇಂದ್ರ ಸರಕಾರ ಕಡ್ಡಾಯ ಮಾಡುವ ಮೂಲಕ ಜನರ ಖಾಸಗಿತನಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ವಾಟ್ಸ್ ಆ್ಯಪ್ನಲ್ಲಿನ ಖಾಸಗಿತನದ ಚರ್ಚೆ ಶುರುವಾಗಿದೆ.
ವಾಟ್ಸ್ ಆ್ಯಪ್ನ ಹೊಸ ಖಾಸಗಿ ನಿಯಮದ ಪ್ರಕಾರ, ಫೇಸ್ಬುಕ್, ವಾಟ್ಸ್ ಆ್ಯಪ್ ನಡುವೆ ಗ್ರಾಹಕರ ಸಂದೇಶಗಳು ಗುಪ್ತವಾಗಿ ಹಂಚಿಕೆಯಾಗುವ ವ್ಯವಸ್ಥೆ ಮಾಡಲಾಗಿದೆ. ಇದು ಗ್ರಾಹಕನ ಖಾಸಗಿತನಕ್ಕೆ ಧಕ್ಕೆಯಲ್ಲವೇ ಎಂದು ಕೆಲ ವಿದ್ಯಾರ್ಥಿಗಳು ಸುಪ್ರೀಂ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪೀಠ, ಖಾಸಗಿತನದ ಬಗ್ಗೆ ಪ್ರಶ್ನೆ ಮಾಡಿತು. ವಾಟ್ಸ್ಆ್ಯಪ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎಂದು ಅಭಯಧಿವಿತ್ತರು. ಆದರೆ ವಾಟ್ಸ್ ಆ್ಯಪ್ನ ಮಾತೃಸಂಸ್ಥೆ ಫೇಸ್ಬುಕ್ ಪರ ವಕೀಲ ಕೆ.ಕೆ. ವೇಣುಗೋಪಾಲ್ ಅವರು, ಮಧ್ಯಪ್ರವೇಶಿಸಿ, ಖಾಸಗಿತನ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಕಾಳಜಿ ಹೊಂದಿರುವವರು ವಾಟ್ಸ್ ಆ್ಯಪ್, ಫೇಸ್ಬುಕ್ ಬಳಕೆಯನ್ನು ನಿಲ್ಲಿಸಬಹುದು ಎಂದು ಹೇಳಿದರು. ವಿದ್ಯಾರ್ಥಿಗಳ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು.