ಈರುಳ್ಳಿಗಾಗಿ ಮಹಿಳೆಯರ ಮಾರಾಮಾರಿ. ಗಲಾಟೆ ನೋಡಿ ಈರುಳ್ಳಿ ವ್ಯಾಪಾರಿ ಪರಾರಿ !
ಈರುಳ್ಳಿಗಾಗಿ ಕೈ ಕೈ ಮಿಲಾಯಿಸಿದ ಮಹಿಳೆಯರು. ಕಾರಣವೇನು ಗೊತ್ತಾ ?
Team Udayavani, Oct 11, 2019, 1:16 PM IST
ಉತ್ತರಪ್ರದೇಶ: ಈರುಳ್ಳಿ ಹಚ್ಚಿದಾಗ ಕಣ್ಣಲ್ಲಿ ನೀರು ಬರುತ್ತದೆ ಎಂಬುದು ತಿಳಿದಿರುವ ವಿಚಾರ. ಆದರೇ ಈರುಳ್ಳಿಗಾಗಿ ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿ ಕಣ್ಣೀರು ಹಾಕುತ್ತಿರುವ ಈ ಮಹಿಳೆಯರ ಕಥೆ ನಿಜಕ್ಕೂ ಸ್ವಾರಸ್ಯಕರವಾಗಿದೆ.
ಉತ್ತರಪ್ರದೇಶದ ಅವ್ರೋಹ ಜಿಲ್ಲೆಯಲ್ಲಿ ಮಹಿಳೆಯೊಬ್ಬರು(ನೇಹಾ) ಈರುಳ್ಳಿ ವ್ಯಾಪಾರಿಯ ಬಳಿ ಚೌಕಾಸಿಗೆ ಇಳಿದಿದ್ದರು. ಆಗ ಅಲ್ಲಿಗೆ ಬಂದ ಮಹಿಳೆಯ ನೆರೆಮನೆಯಾಕೆ(ದೀಪ್ತಿ), ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದ ಅದನ್ನು ಖರೀದಿಸುವ ಸಾಮಾರ್ಥ್ಯ ಈಕೆಗಿಲ್ಲ. ಸಮಯ ವ್ಯರ್ಥ ಮಾಡದೇ ನೀನು ಮುಂದಕ್ಕೆ ಹೋಗು ಎಂದು ಈರುಳ್ಳಿ ವ್ಯಾಪಾರಿಗೆ ತಿಳಿಸಿದ್ದಳು.
ಇದರಿಂದ ಆಕ್ರೋಶಗೊಂಡ ಚೌಕಾಸಿಗೆ ಇಳಿದಿದ್ದ ನೇಹಾ ಮಾತಿನ ಸಮರಕ್ಕೆ ಇಳಿದಿದ್ದಳು. ಮಾತುಗಳು ಎಲ್ಲೇ ಮೀರಿ ಕೊನೆಗೆ ಕೈ ಕೈ ಮಿಲಾಯಿಸಲ್ಪಟ್ಟವು. ಇದಕ್ಕೆ ನೆರೆಮನೆಯ ಇತರ ಮಹಿಳೆಯರು ಕೈ ಜೋಡಿಸಿದ ಪರಿಣಾಮ ಹೊಡೆದಾಟ ಆರಂಭವಾಗಿ ಐವರು ಮಹಿಳೆಯರು ಗಂಭೀರವಾಗಿ ಗಾಯಗೊಂಡರು.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಎರಡು ಕಡೆಯ ಆರು ಜನ ಮಹಿಳೆಯರ ಮೇಲೆ ಪ್ರಕರಣ ದಾಖಲಿಸಿಕೊಂಡು ಕೋರ್ಟ್ ಗೆ ಹಾಜರುಪಡಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.