ಟಿಎಂಸಿ ಸೇರಿದ ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ
Team Udayavani, Mar 13, 2021, 3:28 PM IST
ಕೋಲ್ಕತ್ತಾ: ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷಕ್ಕೆ ಇಂದು (ಮಾರ್ಚ್ 13) ಸೇರ್ಪಡೆಯಾದರು.
ಕೋಲ್ಕತ್ತಾದಲ್ಲಿರುವ ಟಿಎಂಸಿ ಭವನಕ್ಕೆ ಆಗಮಿಸಿದ ಸಿನ್ಹಾ , ಔಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ಮಾಧ್ಯಮಗಳ ಜತೆ ಮಾತಾಡಿರುವ ಅವರು, ನಾನು ಟಿಎಂಸಿ ಸೇರಲು ಪ್ರಮುಖ ಕಾರಣ ನಂದಿಗ್ರಾಮದಲ್ಲಿ ದೀದಿ ಮೇಲೆ ನಡೆದ ದಾಳಿ. ಅಂದೇ ನಾನು ಮಮತಾ ಜೀ ಅವರಿಗೆ ಬೆಂಬಲ ಸೂಚಿಸಲು ನಿರ್ಧರಿಸಿದೆ ಎಂದಿದ್ದಾರೆ. ಸದ್ಯ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಅವರು ಸ್ಪರ್ಧಿಸಲಿದ್ದಾರೆಯೇ ಎನ್ನುವುದು ತಿಳಿದು ಬಂದಿಲ್ಲ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಶವಂತ್ ಸಿನ್ಹಾ ಹಾಗೂ ಮಮತಾ ಬ್ಯಾನರ್ಜಿ ಪ್ರಮುಖ ಖಾತೆ ನಿಭಾಯಿಸಿದ್ದರು. ಇತ್ತೀಚಿಗಷ್ಟೆ ದೀದಿ ಮೇಲೆ ನಡೆದ ದಾಳಿಯನ್ನು ಸಿನ್ಹಾ ಖಂಡಿಸಿದ್ದರು.
ಇನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣೆಯ ಕಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಟಿಎಂಸಿಯ ಸುವೇಂದು ಅಧಿಕಾರಿ ಸೇರಿದಂತೆ ಹಲವು ನಾಯಕರು ಬಿಜೆಪಿ ಸೇರಿದ್ದಾರೆ. ದೀದಿಗೆ ಸೋಲಿನ ರುಚಿ ತೋರಿಸಲು ರಣತಂತ್ರ ಹೆಣೆದಿರುವ ಬಿಜೆಪಿ ಸರಣಿ ಜಾಥಾ ಹಮ್ಮಿಕೊಂಡಿದೆ. ಇತ್ತ ಮಮತಾ ಕೂಡ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.