26/11 ದಾಳಿ; ಹಫೀಜ್ ಸಯೀದ್ ನನ್ನು ಹಸ್ತಾಂತರಿಸಲು ಪಾಕ್ ಗೆ ಭಾರತ ಮನವಿ
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ
Team Udayavani, Dec 29, 2023, 7:28 PM IST
ಹೊಸದಿಲ್ಲಿ: 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಪಾಕಿಸ್ಥಾನಕ್ಕೆ ಭಾರತ ಸರಕಾರ ಮನವಿ ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ಹೇಳಿದ್ದಾರೆ.
ವಿಚಾರಣೆ ಎದುರಿಸಲು ಉಗ್ರನನ್ನು ಹಸ್ತಾಂತರಿಸುವಂತೆ ಪಾಕಿಸ್ಥಾನಕ್ಕೆ ಇದು ಇತ್ತೀಚಿನ ಮನವಿಯಾಗಿದ್ದು, ಸಯೀದ್ ಭಾರತದಲ್ಲಿ ಹಲವಾರು ಪ್ರಕರಣಗಳಿಗೆ ಸಂಬಂಧಿಸಿ ಬೇಕಾಗಿದ್ದಾನೆ ಎಂದು ಬಾಗ್ಚಿ ಹೇಳಿದರು.
ಸಯೀದ್ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನೆಂದು ಪಟ್ಟಿಮಾಡಲ್ಪಟ್ಟಿದ್ದು, 26/11 ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಅಮೆರಿಕ ಈತನ ತಲೆಗೆ 10 ಮಿಲಿಯನ್ ಡಾಲರ್ ಇನಾಮು ಘೋಷಿಸಿದೆ.
2008 ನವೆಂಬರ್ 26 ರಿಂದ ನಾಲ್ಕು ದಿನಗಳ ಅವಧಿಯಲ್ಲಿ ನಡೆಸಿದ ಭೀಕರ ದಾಳಿಗಳಲ್ಲಿ 166 ಮಂದಿ ಬಲಿಯಾಗಿದ್ದರು. 300 ಜನರು ಗಾಯಗೊಂಡಿದ್ದರು.