ಭಾರತದ ಚಹಾದ ಹೆಸರನ್ನು ಕೆಡಿಸಲು ಜಾಗತಿಕ ಮಟ್ಟದಲ್ಲಿ ಪಿತೂರಿ ನಡೆದಿದೆ: ಪ್ರಧಾನಿ ಮೋದಿ
Team Udayavani, Feb 7, 2021, 2:37 PM IST
ಗುವಾಹಟಿ: ಭಾರತದ ವಿರುದ್ಧ ಪಿತೂರಿಗೆ ವಿದೇಶಗಳಲ್ಲಿ ಸಂಚು ನಡೆದಿದೆ. ಅದರಲ್ಲೂ ಭಾರತದ ಚಹಾದ ಹೆಸರು ಕೆಡಿಸಲು ಪಿತೂರಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಸ್ಸಾಂನ ಸೊನಿತ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದ ಚಹಾದ ಹೆಸರನ್ನು ಜಗತ್ತಿನಾದ್ಯಂತ ವ್ಯವಸ್ಥಿತ ರೀತಿಯಲ್ಲಿ ಕೆಡಿಸಲು ಪಿತೂರಿಕೋರರು ಪ್ರಯತ್ನಿಸುತ್ತಿದ್ದಾರೆ. ಭಾರತದ ಹೊರಗಿನ ಕೆಲವರು ಭಾರತದ ಚಹಾ ಮತ್ತು ಇದಕ್ಕೆ ಸಂಬಂಧಿಸಿದ ರಾಷ್ಟ್ರದ ಭಾವನೆಗಳನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ರುಜುವಾತುಪಡಿಸುವ ಕೆಲವು ದಾಖಲೆಗಳು ಹೊರಬಂದಿವೆ” ಎಂದರು.
ಇದನ್ನೂ ಓದಿ:ರೈತರ ಸಮಸ್ಯೆ ಬಗೆಹರಿಸಲು ಮೋದಿ ಮಧ್ಯ ಪ್ರವೇಶಿಸಲೇ ಬೇಕು : ಪವಾರ್
ಇಂತಹ ಕುಕೃತ್ಯಗಳನ್ನು ಒಪ್ಪಲು ಸಾಧ್ಯವೇ? ಇಂತಹ ನೀಚ ಕೆಲಸದಲ್ಲಿ ತೊಡಗಿಸಿಕೊಂಡವರನ್ನು ಸ್ವೀಕರಿಸಲು ಸಾಧ್ಯವೇ? ಇಂತಹ ಸಂಚುಕೋರರನ್ನು ಹೊಗಳುವವರನ್ನು ನೀವು ಒಪ್ಪುತ್ತೀರಾ ಎಂದು ನೆರೆದಿದ್ದ ಜನರನ್ನು ಪ್ರಧಾನಿ ಮೋದಿ ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ಇಂದು ಬಿಸ್ವಾನಾಥ್ ಮತ್ತು ಚಾರೈಡಿಯೊದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಅಡಿಪಾಯ ಹಾಕಿದರು. ಹೆದ್ದಾರಿ ಮತ್ತು ರಸ್ತೆಗಳ ಯೋಜನೆಯಾದ “ಅಸೋಮ್ ಮಾಲಾ” ವನ್ನು ಅವರು ಇಂದು ಪ್ರಾರಂಭಿಸಿದರು.
ಇದನ್ನೂ ಓದಿ:ಉತ್ತರಾಖಂಡದಲ್ಲಿ ಹಿಮನದಿ ಒಡೆದು ಪ್ರವಾಹ ಸೃಷ್ಟಿ : ಹಲವರು ನಾಪತ್ತೆ
ಏಳು ದಶಕಗಳಿಂದ ಸ್ವಾತಂತ್ರ್ಯ ಬಂದಾಗಿನಿಂದ ಅಸ್ಸಾಂನಲ್ಲಿ ಆರು ವೈದ್ಯಕೀಯ ಕಾಲೇಜುಗಳಾಗಿದ್ದವು. ಆದರೆ ಕಳೆದ ಐದು ವರ್ಷಗಳಲ್ಲಿ ನಾವು ಇನ್ನೂ ಆರು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಇದರಿಂದಾಗಿ ಅಸ್ಸಾಂಗೆ ಪ್ರತಿವರ್ಷ 1,600 ಎಂಬಿಬಿಎಸ್ ವೈದ್ಯರು ಸಿಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.