ಲಾಲು ಪೆರೋಲ್ ಮುಂದುವರಿಕೆಗೆ ಹೈಕೋರ್ಟ್ ನಕಾರ,ಆ.30ಕ್ಕೆ ಶರಣಾಗಿ
Team Udayavani, Aug 24, 2018, 3:14 PM IST
ಪಾಟ್ನಾ: ಇನ್ನೂ ಮೂರು ತಿಂಗಳ ಕಾಲ ಜಾಮೀನನ್ನು ಮುಂದುವರಿಸಬೇಕೆಂದು ಕೋರಿದ್ದ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ವರಿಷ್ಠ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಮನವಿಯನ್ನು ತಿರಸ್ಕರಿಸಿರುವ ಜಾರ್ಖಂಡ್ ಹೈಕೋರ್ಟ್ ಆಗಸ್ಟ್ 30ಕ್ಕೆ ಶರಣಾಗುವಂತೆ ಶುಕ್ರವಾರ ಸೂಚಿಸಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಪೆರೋಲ್ ಮೇಲೆ ಹೊರಗಿದ್ದ ಲಾಲುಪ್ರಸಾದ್ ತನ್ನ ಪೆರೋಲ್ ಅವಧಿ ಮುಂದುವರಿಸುವಂತೆ ಕೋರಿದ್ದರು. ಲಾಲು ಸದ್ಯ ರಾಂಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳಿಕ ಅವರನ್ನು ಮುಂಬೈಯ ಏಷ್ಯನ್ ಹಾರ್ಟ್ ಇನ್ಸ್ ಟಿಟ್ಯೂಟ್ ಗೆ ದಾಖಲಿಸಲು ಕರೆತರಬೇಕಾಗಿದೆ ಎಂದು ಲಾಲು ಅವರ ವಕೀಲರು ತಿಳಿಸಿದ್ದಾರೆ.
ಮೇವು ಹಗರಣ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. 2017ರ ಡಿಸೆಂಬರ್ 23ರಿಂದ ಲಾಲು ಜೈಲಿನಲ್ಲಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಕೋರ್ಟ್ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅನುಮತಿ ನೀಡಿತ್ತು.