ಕಾಶಿಯ ಜನರು ಸ್ಫೂರ್ತಿಯ ಸೆಲೆ ; ವಾರಾಣಸಿ NGOಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ
Team Udayavani, Jul 10, 2020, 6:00 AM IST
ಹೊಸದಿಲ್ಲಿ: ಕೋವಿಡ್ 19 ವೈರಸ್ನ ಈ ಸಂಕಷ್ಟದ ಸಮಯದಲ್ಲೂ ಕಾಶಿಯು ಭರವಸೆ ಮತ್ತು ಉತ್ಸಾಹದ ಕೇಂದ್ರವಾಗಿದೆ.
ಕಾಶಿಯ ಮುಂದೆ ಕೋವಿಡ್ 19 ವೈರಸ್ ಏನೂ ಅಲ್ಲ.
ಇಲ್ಲಿನ ಜನರು ಸ್ಫೂರ್ತಿಯ ಸೆಲೆಯಾಗಿದ್ದಾರೆ. ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ.
ಗುರುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿನ ಎನ್ಜಿಒಗಳ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದದಲ್ಲಿ ಮೋದಿ ಈ ಮಾತುಗಳನ್ನಾಡಿದ್ದಾರೆ.
ಕೋವಿಡ್ 19 ಲಾಕ್ಡೌನ್ ಅವಧಿಯಲ್ಲಿ ಕಷ್ಟದಲ್ಲಿದ್ದವರು ಹಾಗೂ ಬಡವರಿಗೆ ಎಲ್ಲ ರೀತಿಯ ನೆರವು ಒದಗಿಸಿದ ಸರ್ಕಾರೇತರ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ನನಗೆ ನಿಮ್ಮೆಲ್ಲರನ್ನು ನೋಡಿದ ಮೇಲೆ ಇನ್ನಷ್ಟು ಕೆಲಸ ಮಾಡಬೇಕೆಂಬ ಪ್ರೇರಣೆ ಮೂಡಿದೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಎಂದಿದ್ದಾರೆ.
ಭಾರತದಲ್ಲಿ ಕೋವಿಡ್ 19 ಸ್ಥಿತಿ ಭಯಾನಕವಾಗಲಿದೆ ಎಂದೆಲ್ಲ ತಜ್ಞರು ಹೇಳುತ್ತಿದ್ದರು. ಆದರೆ, 24.42 ಕೋಟಿ ಜನಸಂಖ್ಯೆಯಿರುವ ಉತ್ತರ ಪ್ರದೇಶದಲ್ಲಿ ಏನಾಯಿತು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಜನರೆಲ್ಲರ ಸಹಕಾರದೊಂದಿಗೆ ಕೋವಿಡ್ 19 ವೈರಸನ್ನು ಸಮರ್ಥವಾಗಿ ಎದುರಿಸಿ ಹಣಿಯಲು ಸರಕಾರ ಯಶಸ್ವಿಯಾಗಿದೆ ಎಂದಿದ್ದಾರೆ.
ಇದೇ ವೇಳೆ, ಉತ್ತರಪ್ರದೇಶದಷ್ಟೇ ಜನಸಂಖ್ಯೆ ಹೊಂದಿರುವ ಬ್ರೆಜಿಲ್ನ ಪರಿಸ್ಥಿತಿಯನ್ನು ಹೋಲಿಕೆ ಮಾಡಿದ ಮೋದಿ ಅವರು, ಬ್ರೆಜಿಲ್ನಲ್ಲಿ ಕೋವಿಡ್ 19ಗೆ 65 ಸಾವಿರಕ್ಕೂ ಅಧಿಕ ಮಂದಿ ಬಲಿಯಾದರೆ, ಉ.ಪ್ರದೇಶದಲ್ಲಿ 800 ಸಾವುಗಳು ಸಂಭವಿಸಿವೆ. ಜನರ ಜೀವಗಳನ್ನು ರಕ್ಷಿಸುವಲ್ಲಿ ಸರಕಾರ ಸಫಲವಾಗಿರುವುದಕ್ಕೆ ಇದುವೇ ಸಾಕ್ಷಿ ಎಂದಿದ್ದಾರೆ.