ಕಾವೇರಿ ಜಲ ನಿರ್ವಹಣೆ ಪ್ರಾಧಿಕಾರ ಹಲ್ಲು ಕಿತ್ತ ಹಾವು
Team Udayavani, Jun 28, 2019, 5:33 AM IST
ಚೆನ್ನೈ: ಕಾವೇರಿ ಜಲ ನಿರ್ವಹಣೆ ಪ್ರಾಧಿಕಾರವು ಹಲ್ಲು ಕಿತ್ತ ಹಾವಿನಂತಿದೆ. ಹೀಗಾಗಿ, ತಮಿಳುನಾಡಿಗೆ 40.43 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಆಗ್ರ ಹಿಸಿದ್ದಾರೆ. ತಮಿಳುನಾಡಿಗೆ 9.19 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಪ್ರಾಧಿಕಾರ ಹೊರಡಿಸಿದ ಮೊದಲ ಆದೇಶವನ್ನೇ ಕರ್ನಾ ಟಕ ಅನುಸರಿಸಿಲ್ಲ.
ನೆರೆ ರಾಜ್ಯವನ್ನು ತಮಿಳುನಾಡು ಸರ್ಕಾರ ಈ ಬಗ್ಗೆ ಪ್ರಶ್ನಿಸುತ್ತಲೂ ಇಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರವನ್ನು ಆಗ್ರಹಿಸುತ್ತಲೂ ಇಲ್ಲ. ಅಷ್ಟೇ ಅಲ್ಲ, ಕಳೆದ ವರ್ಷ ಜುಲೈನಲ್ಲಿ 31.24 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕೆಂಬ ಪ್ರಾಧಿಕಾರದ ಆದೇಶವನ್ನೂ ಕರ್ನಾಟಕ ಅನುಸರಿಸಿಲ್ಲ ಎಂದು ಸ್ಟಾಲಿನ್ ಆಕ್ಷೇಪಿಸಿದ್ದಾರೆ. ಹೀಗಿದ್ದರೂ, ಕ್ರಮ ತೆಗೆದುಕೊಳ್ಳಲು ವಿಫಲವಾಗಿರುವ ಪ್ರಾಧಿಕಾರ ಹಲ್ಲು ಕಿತ್ತ ಹಾವಿನಂತಿದೆ ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.