ಕೇದಾರನಾಥನ ಗರ್ಭಗುಡಿಯಲ್ಲಿ ಬಂಗಾರದ ಲೇಪಕ್ಕೆ ಪುರೋಹಿತರ ವಿರೋಧ
ಗೋಡೆಗೆ ಹಾನಿಯಾಗುವ ಭೀತಿ; ಪುರೋಹಿತರ ನಡುವೆಯೇ ಭಿನ್ನಮತ
Team Udayavani, Sep 18, 2022, 7:25 AM IST
ಡೆಹ್ರಾಡೂನ್: ಭಾರತದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ಶಿವ ದೇವಸ್ಥಾನದ ಗರ್ಭಗುಡಿಯಲ್ಲಿರುವ ನಾಲ್ಕು ಗೋಡೆಗಳಿಗೆ ಬಂಗಾರದ ಹೊದಿಕೆಗಳನ್ನು ಹಾಕಲಾಗುತ್ತಿದೆ. ಇದನ್ನು ಕೇದಾರನಾಥದ ಪುರೋಹಿತರ ಗುಂಪೊಂದು ತೀವ್ರವಾಗಿ ವಿರೋಧಿಸಿದೆ.
ಇದು ಕೇದಾರನಾಥ ದೇವಸ್ಥಾನದ ಪಾರಂಪರಿಕ ಶೈಲಿಯನ್ನು ಹಾಳು ಮಾಡುತ್ತಿದೆ, ಗೋಡೆಗಳ ರೂಪವೇ ಬದಲಾಗುತ್ತಿದೆ ಎನ್ನುವುದು ಈ ಪುರೋಹಿತರ ಕಳವಳ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಗೋಡೆಗಳಿಗೆ ಮಹಾರಾಷ್ಟ್ರದ ಶಿವಭಕ್ತರೊಬ್ಬರ ಆಶಯದಂತೆ ಬಂಗಾರದ ಲೇಪನ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಬದರೀನಾಥ-ಕೇದಾರನಾಥ ದೇವಸ್ಥಾನ ಸಮಿತಿ, ಉತ್ತರಾಖಂಡ ಸರ್ಕಾರ ಒಪ್ಪಿಗೆ ಸೂಚಿಸಿವೆ. ಇದಕ್ಕಾಗಿ ಈಗಾಗಲೇ ಗರ್ಭಗುಡಿಯ ನಾಲ್ಕೂ ಗೋಡೆಗಳಲ್ಲಿರುವ ಬೆಳ್ಳಿಯ ಹೊದಿಕೆಯನ್ನು ತೆಗೆಯಲಾಗುತ್ತಿದೆ.
ಆದರೆ, ಈ ಪ್ರಕ್ರಿಯೆಗೆ ದೊಡ್ಡದೊಡ್ಡ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ಹೀಗಾಗಿ, ದೇಗುಲದ ಗೋಡೆಗೆ ಹಾನಿಯಾಗಬಹುದು. ಈ ಯಂತ್ರಗಳಿಂದಲೇ ದೇವಸ್ಥಾನದ ಪಾರಂಪರಿಕತೆ ನಾಶವಾಗುತ್ತಿದೆ ಎನ್ನುವುದು ಪುರೋಹಿತರ ಅಳಲು. ಆದರೆ ಪುರೋಹಿತರ ನಡುವೆಯೇ ಭಿನ್ನಮತ ಸೃಷ್ಟಿಯಾಗಿದೆ. ಕೆಲವು ಹಿರಿಯ ಪುರೋಹಿತರು ಈ ನವೀಕರಣದ ಪರವಾಗಿ ನಿಂತಿದ್ದಾರೆ. ಈ ನವೀಕರಣದಿಂದ ದೇವಸ್ಥಾನದ ಹಿಂದೂ ಧಾರ್ಮಿಕತೆ ಬೆಳೆಯುತ್ತದೆ ಎನ್ನುವುದು ಪರವಾಗಿ ನಿಂತಿರುವವರ ವಾದ.