ಚೆನ್ನೈ ; ಬ್ಯಾಂಕಾಕ್ ನಿಂದ ಬಂದ ಪ್ರಯಾಣಿಕನ ಬ್ಯಾಗ್ ನಲ್ಲಿ ಚಿರತೆ ಮರಿ
Team Udayavani, Feb 2, 2019, 12:01 PM IST
ಚೆನ್ನೈ: ಥಾಯ್ ಏರ್ ವೇಸ್ ವಿಮಾನದಲ್ಲಿ ಬ್ಯಾಂಕಾಕ್ ನಿಂದ ಚೆನ್ನೆಗೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ ನಲ್ಲಿ ಚಿರತೆಯ ಪುಟಾಣಿ ಮರಿಯೊಂದನ್ನು ಕಸ್ಟಮ್ಸ್ ಅಧಿಕಾರಿಗಳು ಶನಿವಾರ ಪತ್ತೆ ಬೆಳಗ್ಗೆ ಪತ್ತೆ ಹಚ್ಚಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದ ವೇಳೆ ಬ್ಯಾಗ್ ನೊಳಗಿಂದ ಕುಣಿದು ಕುಪ್ಪಳಿಸುತ್ತ, ಕೀರಲು ಧ್ವನಿಯ ಶಬ್ದ ಬರುತ್ತಿತ್ತು. ಕೂಡಲೇ ಕಸ್ಟಮ್ಸ್ ಅಧಿಕಾರಿಗಳು 45ರ ಹರೆಯದ ಕಾಹಾ ಮೊಯ್ದೀನ್ ನ ಬ್ಯಾಗ್ ಅನ್ನು ಪರಿಶೀಲಿಸಿದಾಗ ನಸುಗೆಂಪು ಪ್ಲಾಸ್ಟಿಕ್ ಬಾಸ್ಕೆಟ್ ನೊಳಗೆ ಚಿರತೆ ಮರಿಯನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿತ್ತು.
ತೀವ್ರ ಗಾಬರಿಗೊಳಗಾಗಿದ್ದ ಚಿರತೆ ಮರಿ ವಿಚಿತ್ರ ಶಬ್ದ ಹೊರಡಿಸುತ್ತಿತ್ತು. ಕೂಡಲೇ ಕಸ್ಸಮ್ಸ್ ಅಧಿಕಾರಿಗಳು ಬಾಟಲಿಯಲ್ಲಿ ಹಾಲನ್ನು ಹಾಕಿ ಕುಡಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಕೂಡಲೇ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹೆಣ್ಣು ಚಿರತೆ ಮರಿ ಎಂದು ಗುರುತಿಸಿದ್ದಾರೆ.
ತದನಂತರ ಚಿರತೆ ಮರಿಯನ್ನು ತಂದಿದ್ದ ಪ್ರಯಾಣಿಕ ಮೊಯ್ದೀನ್ ಹಾಗೂ ಚಿರತೆ ಮರಿಯನ್ನು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದು, ವನ್ಯಜೀವಿ ರಕ್ಷಣಾ ಕಾಯ್ದೆ 1972ರ ಪ್ರಕಾರ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.