Maldives ರಾಯಭಾರಿ ಕರೆಸಿ ಭಾರತ ತಪರಾಕಿ: ದಿಲ್ಲಿ ವಿದೇಶಾಂಗ ಕಚೇರಿಗೆ ಕರೆಸಿ ಆಕ್ಷೇಪ
ಭಾರತದ ಬೆಂಬಲಕ್ಕೆ ನಿಂತ ಇಸ್ರೇಲ್
Team Udayavani, Jan 9, 2024, 6:30 AM IST
ಮಾಲೆ/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ಮಾಲ್ದೀವ್ಸ್ ಸರಕಾರಕ್ಕೆ ಸೋಮವಾರ ಕೇಂದ್ರ ಸರಕಾರ ಪ್ರಬಲವಾಗಿ ಆಕ್ಷೇಪ ಸಲ್ಲಿಕೆ ಮಾಡಿದೆ. ಹೊಸದಿಲ್ಲಿಯಲ್ಲಿ ಇರುವ
ಮಾಲ್ದೀವ್ಸ್ನ ರಾಯಭಾರಿ ಇಬ್ರಾಹಿಂ ಶಬೀಬ್ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಿಸಿ ಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮೂವರು ಸಚಿವರ ವರ್ತನೆಯನ್ನು ಅತ್ಯುಗ್ರವಾಗಿ ಖಂಡಿಸಿ, ಕೇಂದ್ರ ಸರಕಾರ ಇಂಥ ವರ್ತನೆಗಳನ್ನು ಸಹಿಸು ವುದಿಲ್ಲ ಎಂದೂ ಅವರಿಗೆ ಮನವರಿಕೆ ಮಾಡಿ ಕೊಡಲಾಯಿತು.
ಅದಕ್ಕೆ ಪೂರಕವಾಗಿ ಮಾಲ್ದೀವ್ಸ್ ರಾಜಧಾನಿ ಮಾಲೆಯಲ್ಲಿ ಕೂಡ ಭಾರತದ ಹೈಕಮಿಷನರ್ ಮನು ಮಹಾವರ್ ಕೂಡ ಅಲ್ಲಿನ ವಿದೇಶಾಂಗ ಸಚಿವ ಡಾ| ಅಲಿ ನಸೀರ್ ಮೊಹಮ್ಮದ್ ಜತೆಗೆ ಭೇಟಿಯಾಗಿದ್ದರು. ಈ ಅವಧಿಯಲ್ಲಿ ಅಮಾನತು ಗೊಂಡಿರುವ ಮೂವರು ಸಚಿವರ ವರ್ತನೆಯನ್ನು ಭಾರತ ಸರಕಾರ ಗಂಭೀರವಾಗಿ ಪರಿಗಣಿಸು ವುದಾಗಿ ಹೇಳಿದ್ದಾರೆ.
ಅದಕ್ಕೆ ಉತ್ತರ ನೀಡಿದ ಮಾಲ್ದೀವ್ಸ್ ಸಚಿವರು ಇಂಥ ಹೇಳಿಕೆಗಳು ಸಚಿವರದ್ದು ವೈಯಕ್ತಿಕ ಅಭಿಪ್ರಾಯವೇ ಆಗಿರುತ್ತದೆಯೇ ಹೊರತು. ಸರಕಾರದ್ದಲ್ಲ. ಭಾರತದ ಜತೆಗೆ ನಮ್ಮ ಸರಕಾರ ಉತ್ತಮ ಬಾಂಧವ್ಯ ಮುಂದುವರಿಸಲು ಯಾವತ್ತೂ ಆಸಕ್ತಿ ಹೊಂದಿದೆ ಎಂದು ಹೇಳಿದ್ದಾರೆ. ಅವಹೇಳನ ಕಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತದ ಹೈಕಮಿಷನರ್ಗೆ ಸಮಜಾಯಿಷಿ ನೀಡಿದ್ದಾರೆ.
ದೇಶಿ ಬೀಚ್ಗಳ ಪ್ರೋತ್ಸಾಹಿಸಿ: ಬಚ್ಚನ್ ಮನವಿ
ಮಾಲ್ದೀವ್ಸ್ ಸಚಿವರ ವರ್ತನೆಯನ್ನು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಲಕ್ಷದ್ವೀಪ ಸೇರಿದಂತೆ ದೇಶದ ಬೀಚ್ಗಳನ್ನು ನಾವು ಪ್ರೋತ್ಸಾಹಿಸಬೇಕು. ಜತೆಗೆ ಅದೊಂದು ಅತ್ಯುತ್ತಮ ತಾಣ ಎಂದಿದ್ದಾರೆ. ಯಾವುದಾರೂ ಬೆಲೆ ತೆತ್ತು ಆತ್ಮನಿರ್ಭರತೆ ಸಾಧಿಸಬೇಕೇ ಎಂದು ಪ್ರಶ್ನಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ “ಭಾರತ ಎಲ್ಲ ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸುತ್ತದೆ. ನಮ್ಮ ದೇಶದಲ್ಲಿ ಉಡುಪಿ, ಪಾಂಡಿಚೇರಿ ಬೀಚ್ಗಳೇ ಆಗಿರಬಹುದು. ಇದರ ಜತೆಗೆ ಪ್ರವಾಸಿಗರು ಹೋಗದಿರುವ ಬೀಚ್ಗಳೂ ಬೆಳಕಿಗೆ ಬಂದು ಅಭಿವೃದ್ಧಿ ಗೊಳ್ಳಬೇಕು. ಅಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೊಳ್ಳಬೇಕು ಎಂದಿದ್ದಾರೆ. ಅದಕ್ಕೆ ಅಮಿತಾಭ್ ಬಚ್ಚನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಫ್ತು ಬೇಡ: ಕೈಗಾರಿಕ ಒಕ್ಕೂಟ
ಸೆಲೆಬ್ರಿಟಿಗಳು, ದೇಶದ ನಾಗರಿಕರಿಂದ ಆಕ್ರೋಶಕ್ಕೆ ತುತ್ತಾಗಿರುವ ಮಾಲ್ದೀವ್ಸ್ ವಿರುದ್ಧ ಈಗ ಭಾರತೀಯ ವಾಣಿಜ್ಯ ಒಕ್ಕೂಟ (ಐಸಿಸಿ) ಸಿಡಿದೆದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳ ನಕಾರಿಯಾಗಿ ಟ್ವೀಟ್ ಮಾಡಿರುವ ಭಾರತದ ನೆರೆಯ ದೇಶದ ವಿರುದ್ಧ ವ್ಯಾಪಾರ ವಹಿವಾಟು ಪ್ರಮಾಣ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದೆ. ಇದರ ಜತೆಗೆ ಅಖೀಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೂಡ ಮಾಲ್ದೀವ್ಸ್ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ರಫ್ತು ಪ್ರಮಾಣ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದೆ.
ಭಾರತದ ಬೆಂಬಲಕ್ಕೆ ನಿಂತ ಇಸ್ರೇಲ್
ಇಂದು ಲಕ್ಷದ್ವೀಪದಲ್ಲಿ ಉಪ್ಪುನೀರು ಸಂಸ್ಕರಣೆ ಆರಂಭ
ಭಾರತ ಮತ್ತು ಮಾಲ್ದೀವ್ಸ್ ನಡುವೆ ರಾಜತಾಂತ್ರಿಕ ವಿವಾದ ಭುಗಿಲೆದ್ದಿರುವ ನಡುವೆಯೇ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಇಸ್ರೇಲ್ ಘೋಷಿಸಿದೆ. ಈ ಮೂಲಕ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದು ಪೆಟ್ಟು ತಿಂದಿದ್ದ ಮಾಲ್ದೀವ್ಸ್ನ “ಗಾಯಕ್ಕೆ ಉಪ್ಪು’ ಸವರಿದೆ.
ಸೋಮವಾರ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ, “ಕಳೆದ ವರ್ಷವೇ ನಾವು ಭಾರತ ಸರಕಾರದ ಕೋರಿಕೆಯ ಮೇರೆಗೆ ಉಪ್ಪು ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸುವ ಉಪ್ಪಿಳಿಕೆ ಯೋಜನೆ (ಡಿಸ್ಯಾಲಿನೇಶನ್ ಪ್ರಾಜೆಕ್ಟ್)ಯನ್ನು ಕೈಗೆತ್ತಿಕೊಳ್ಳಲು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೆವು. ನಾಳೆಯಿಂದಲೇ ಈ ಯೋಜನೆ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಲು ಇಸ್ರೇಲ್ ಸಿದ್ಧವಾಗಿದೆ’ ಎಂದು ಎಕ್ಸ್ನಲ್ಲಿ ಬರೆದುಕೊಂಡಿದೆ. ಲವಣಯುಕ್ತ ನೀರಿನಿಂದ ಖನಿಜ ಘಟಕಗಳನ್ನು ಹೊರತೆಗೆದು, ನೀರನ್ನು ಶುದ್ಧೀಕರಿಸುವ ಯೋಜನೆ ಇದಾಗಿದೆ. ಇದರ ಮೂಲಕ ಸಮುದ್ರದ ನೀರನ್ನು ಮಾನವ ಬಳಕೆಗೆ ಮತ್ತು ನೀರಾವರಿಗೆ ಸೂಕ್ತವಾಗುವಂತೆ ಪರಿವರ್ತಿಸಲಾಗುತ್ತದೆ.
ನೆಟ್ನಲ್ಲಿ ಲಕ್ಷ ದ್ವೀಪ ಸರ್ಚ್ ಶೇ.3400 ಹೆಚ್ಚಳ
ಪ್ರಧಾನಿ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಬಂದ ಬೆನ್ನಲ್ಲೇ ಲಕ್ಷದ್ವೀಪದ ಬಗ್ಗೆ ಹುಡುಕಾಟ ನಡೆಸುವವರ ಪ್ರಮಾಣ ಶೇ.3400ರಷ್ಟು ಹೆಚ್ಚಳವಾಗಿದೆ ಎಂದು ಆನ್ಲೈನ್ ಟ್ರಾವೆಲ್ ಸಂಸ್ಥೆ ಮೇಕ್ವೆುç ಟ್ರಿಪ್ ಹೇಳಿದೆ. ಎಕ್ಸ್ನಲ್ಲಿ ಈ ಕುರಿತು ಬರೆದುಕೊಂಡಿರುವ ಸಂಸ್ಥೆ, ಲಕ್ಷದ್ವೀಪದ ಕುರಿತಾದ ಹುಡುಕಾಟ ಹೆಚ್ಚಳವಾಗಿರುವುದು ಮತ್ತು ಭಾರತದ ಕಡಲತೀರಗಳ ಕುರಿತು ಆಸಕ್ತಿ ಹೆಚ್ಚಿರುವುದು ಹೊಸ ಬೆಳವಣಿಗೆಯಾಗಿದ್ದು, ಇದೇ ಕಾರಣಕ್ಕೆ ನಮ್ಮ ಸಂಸ್ಥೆಯು “ಬೀಚಸ್ ಆಫ್ ಇಂಡಿಯಾ’ ಅಭಿಯಾನವನ್ನು ಆರಂಭಿಸುತ್ತಿದ್ದೇವೆ ಎಂದು ಘೋಷಿಸಿದೆ.
ಬುಕಿಂಗ್ ರದ್ದು: ಮತ್ತೂಂದು ಆನ್ಲೈನ್ ಟ್ರಾವೆಲ್ ಕಂಪೆನಿ ಈಸ್ ಮೈ ಟ್ರಿಪ್, “ಬಾಯ್ಕಟ್ ಮಾಲ್ದೀವ್ಸ್’ ಅಭಿಯಾನಕ್ಕೆ ಬೆಂಬಲವಾಗಿ ತಾನು ಮಾಲ್ದೀವ್ಸ್ಗೆ ಮಾಡಿದ್ದ ಎಲ್ಲ ವಿಮಾನಗಳ ಟಿಕೆಟ್ ಬುಕಿಂಗ್ ಅನ್ನು ರದ್ದು ಮಾಡಿದೆ. ನಮಗೆ ಬ್ಯುಸಿನೆಸ್ಗಿಂತಲೂ ದೇಶವೇ ಮುಖ್ಯ. ನಮ್ಮ ದೇಶದ ಇತರ ಸಂಸ್ಥೆಗಳು ಕೂಡ ಇದನ್ನೇ ಅನುಸರಿಸಬೇಕು ಎಂದು ಸಂಸ್ಥೆಯ ಸಹಸ್ಥಾಪಕ ನಿಶಾಂತ್ ಪಿಟ್ಟಿ ಹೇಳಿದ್ದಾರೆ.