ದೀದಿ ರ್ಯಾಲಿಗೆ ಪ್ರಶಾಂತ್ ಕಿಶೋರ್ ಗೈರು
Team Udayavani, Jul 22, 2019, 5:10 AM IST
ಕೋಲ್ಕತಾ: ತೃಣಮೂಲ ಕಾಂಗ್ರೆಸ್ ರವಿವಾರ ಕೋಲ್ಕತಾದಲ್ಲಿ ಆಯೋಜಿಸಿದ್ದ ‘ಹುತಾತ್ಮರ ದಿನ ರ್ಯಾಲಿ’ಗೆ ಚುನಾವಣಾ ವ್ಯೂಹ ರಚನೆಕಾರ ಪ್ರಶಾಂತ್ ಕಿಶೋರ್ ಗೈರು ಹಾಜರಾಗಿದ್ದಾರೆ. ಹೀಗಾಗಿ, ಟಿಎಂಸಿ ನಾಯಕಿ 2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿ ಬಿಜೆಪಿಯನ್ನು ಎದುರಿಸುವ ನಿಟ್ಟಿನಲ್ಲಿ ಕಿಶೋರ್ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಸದ್ಯ ಜೆಡಿಯು ನಾಯಕರೂ ಆಗಿರುವ ಪ್ರಶಾಂತ್ ಕಿಶೋರ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿರುವ ರ್ಯಾಲಿಯಲ್ಲಿ ಭಾಗವಹಿಸಲಿರುವರೇ ಎಂಬ ಪ್ರಶ್ನೆಯೂ ಮೂಡಿತ್ತು.
ಈ ಬಗ್ಗೆ ಮಾತನಾಡಿರುವ ಟಿಎಂಸಿ ನಾಯಕರೊಬ್ಪರು ‘ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಅವರು, ನಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ. ಏಕೆಂದರೆ ಬಿಜೆಪಿ ಜೆಡಿಯು ಮೈತ್ರಿ ಪಕ್ಷಗಳು’ ಎಂದಿದ್ದಾರೆ.
ದೀದಿ ವಾಗ್ಧಾಳಿ: ಕರ್ನಾಟಕದಲ್ಲಿ ಬಿಜೆಪಿ ಕುದುರೆ ವ್ಯಾಪಾರಕ್ಕೆ ಇಳಿದಿದೆ ಎಂದು ಆರೋಪಿಸಿರುವ ಸಿಎಂ ಮಮತಾ ಬ್ಯಾನರ್ಜಿ, ಅದೇ ಮಾದರಿಯನ್ನು ಪಶ್ಚಿಮ ಬಂಗಾಳದಲ್ಲಿ ಅನುಸರಿಸಲಾಗುತ್ತಿದೆ. ಟಿಎಂಸಿ ಶಾಸಕರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಮತ್ತು ದೇಶದ ಇತರ ಭಾಗಕ್ಕೆ ಅದನ್ನು ಸ್ತರಿಸಲು ಯೋಜಿಸುತ್ತಿದೆ ಎಂದು ದೂರಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಟಿಎಂಸಿ ನಾಯಕರಿಗೆ ಬಿಜೆಪಿ ಸೇರುವ ಬಗ್ಗೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದಾರೆ.