ಗೋವಾದ ಅನೇಕ ಜನರಿಗೆ ನೀರಿನ ಸಂಪರ್ಕವಿಲ್ಲ: ಪಾಲೇಕರ್ ಆರೋಪ
ಪ್ರಮೋದ್ ಸಾವಂತ್ "ಹರ್ ಘರ್ ಜಲ್" ಸುಳ್ಳು ಘೋಷಣೆ ಮಾಡಿದ್ದಾರೆ...
Team Udayavani, Aug 21, 2022, 5:34 PM IST
ಪಣಜಿ: ಇಂದಿಗೂ ರಾಜ್ಯದ ಅನೇಕ ಜನರು ವಿವಿಧ ಕಾರಣಗಳಿಂದ ಕುಡಿಯುವ ನೀರಿನ ಸಂಪರ್ಕದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರತಿ ಮನೆಯಲ್ಲಿ ಟ್ಯಾಪ್ ಸಂಪರ್ಕ ಸಾಧ್ಯವಾಗದಿದ್ದರೆ, “ಹರ್ ಘರ್ ಜಲ್” ಪ್ರಮಾಣಪತ್ರದ ಪ್ರಶ್ನೆಯೇ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಸುಳ್ಳು ಘೋಷಣೆಗಳ ಮೂಲಕ ರಾಜ್ಯದ ಜನರನ್ನು ಮರುಳು ಮಾಡುವುದನ್ನು ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಅಮಿತ್ ಪಾಲೇಕರ್ ಆರೋಪಿಸಿದ್ದಾರೆ.
ಪಣಜಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನೀರಿನ ಪೈಪ್ಲೈನ್ ಸಂಪರ್ಕ ಪಡೆಯದ ಹಲವು ಗ್ರಾಮಗಳು ಮತ್ತು ಬಡಾವಣೆಗಳಿದ್ದು, ನೀರಿನ ಪೈಪ್ ಹಾಕಿರುವ ಹಲವು ಕಡೆ ನೀರು ಪೂರೈಕೆಯಾಗುತ್ತಿಲ್ಲ. ಹಲವೆಡೆ ಗೋವಾದಲ್ಲಿ ಪ್ರತಿ ವಾರ ನೀರು ಪೂರೈಕೆಯಾಗುತ್ತಿಲ್ಲ ಎಂದು ಆಕ್ರೋಶಗೊಂಡ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. 100ರಷ್ಟು ಹರ್ ಘರ್ ಜಲ್ ಎಂಬ ಪೊಳ್ಳು ಹೇಳಿಕೆ ನೀಡುವ ಮೂಲಕ ಬಿಜೆಪಿ ಜನರ ಗಾಯಕ್ಕೆ ಉಪ್ಪು ಸವರುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೆಬ್ಸೈಟ್ ಪ್ರಕಾರ, ಸೆಪ್ಟೆಂಬರ್ 2020 ರಿಂದ, ಗೋವಾದಲ್ಲಿ ಒಂದೇ ಒಂದು ಮನೆಗೆ ನೀರು ಸರಬರಾಜು ಮಾಡಲಾಗಿಲ್ಲ, ಹಾಗಾದರೆ ಈ ದಿಢೀರ್ ಘೋಷಣೆ ಏಕೆ? ಸರಕಾರ ತನ್ನ ಅದಕ್ಷತೆಯ ಬಗ್ಗೆ ನಾಚಿಕೆಪಡುವ ಬದಲು, ನಕಲಿ ಆಚರಣೆ, ಜಾಹೀರಾತು ಫಲಕ ಮತ್ತು ಪ್ರಚಾರಕ್ಕಾಗಿ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದೆ. ಇಂದಿಗೂ ಗೋವಾ ರಾಜ್ಯದಲ್ಲಿ ಅನೇಕ ಕಡೆ ಕುಡಿಯುವ ನೀರು ಪೂರೈಕೆಗಾಗಿ ಪೈಪ್ಲೈನ್ ಮಾಡಲಾಗುತ್ತಿದೆ. ಆಮ್ ಆದ್ಮಿ ಪಕ್ಷವು ಈ ಸ್ಥಳಗಳ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಬಿಜೆಪಿ ಸರ್ಕಾರದ ಸುಳ್ಳು ಹೇಳಿಕೆಗಳನ್ನು ಪಕ್ಷವು ಶೀಘ್ರದಲ್ಲೇ ಬಹಿರಂಗಪಡಿಸಲಿದೆ ಮತ್ತು ಮುಖ್ಯಮಂತ್ರಿ ಡಾ. ಸಾವಂತ್ ಅವರನ್ನು ಭೇಟಿ ಮಾಡಲು ಆಹ್ವಾನಿಸುತ್ತಿದ್ದೇವೆ ಎಂದು ಪಾಲೇಕರ್ ತಿಳಿಸಿದ್ದಾರೆ.