ಕುಟುಂಬ ರಾಜಕಾರಣ ಪ್ರಜಾಪ್ರಭುತ್ವದ ಪರಮಶತ್ರು
Team Udayavani, Jan 13, 2021, 6:40 AM IST
ಹೊಸದಿಲ್ಲಿ: ಪ್ರಜಾಪ್ರಭುತ್ವಕ್ಕೆ ಅತೀದೊಡ್ಡ ಶತ್ರುವಾದ ಕುಟುಂಬ ರಾಜಕಾರಣ ರಾಷ್ಟ್ರಕ್ಕೆ ಹೊರೆ. ಅದು ಸರ್ವಾಧಿಕಾರಿ ಆಡಳಿತದ ಮತ್ತೂಂದು ಸ್ವರೂಪ ಎಂದು ವಿಶ್ಲೇಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದಾರೆ.
2ನೇ ರಾಷ್ಟ್ರೀಯ ಯೂತ್ ಪಾರ್ಲಿಮೆಂಟ್ ಫೆಸ್ಟಿವಲ್ ಉದ್ದೇಶಿಸಿ ಮಾತನಾಡಿದ ಅವರು, “ಕುಟುಂಬ ರಾಜ ಕಾರಣದಲ್ಲಿ ಭ್ರಷ್ಟಾಚಾರ, ಕಾನೂನಿಗೆ ಅಗೌರವ ತೋರುವಿಕೆಯೇ ಅಧಿಕ
ವಿರುತ್ತದೆ. ಹೀಗಾಗಿ, ಇಂಥ ಕೌಟುಂಬಿಕ ಹಿನ್ನೆಲೆಯುಳ್ಳವರಿಗೆ ಕಾನೂನಿನ ಮೇಲೆ ಯಾವುದೇ ಗೌರವವಾಗಲಿ, ಭಯ ವಾಗಲಿ ಇರುವುದಿಲ್ಲ’ ಎಂದರು.
ಅದೊಂದು ಕಾಯಿಲೆ!: “ಸರ್ನೇಮ್ಗಳನ್ನಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲುವವರ ಸಂಖ್ಯೆ ಈ ದಿನಗಳಲ್ಲಿ ಕ್ಷೀಣಿಸುತ್ತಿದೆ. ಆದರೂ ಕುಟುಂಬ ರಾಜಕಾರಣವೆಂಬ ರೋಗ ರಾಜಕೀಯದಿಂದ ಇನ್ನೂ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಅವುಗಳ ಬೇರು ಇನ್ನೂ ಇರುವುದು ದೇಶಕ್ಕೆ ಅಪಾಯ’ ಎಂದು ಹೇಳಿದರು.
ಯುವಕರಿಗೆ ಕರೆ: “ಯುವಕರು ಹೆಚ್ಚೆಚ್ಚು ರಾಜಕೀಯ ಪ್ರವೇಶಿಸಿದರೆ, ಕುಟುಂಬ ರಾಜಕಾರಣವೆಂಬ ವಿಷವನ್ನು ದುರ್ಬಲಗೊಳಿಸಬಹುದು. ರಾಜಕೀಯ ಸಹಿತ ಹಲವು ರಂಗಗಳಿಗೆ ಯುವಕರ ಹೊಸ ಆಲೋಚನೆ, ಶಕ್ತಿ, ಪರಿಕಲ್ಪನೆ ಮತ್ತು ರಾಶಿ ರಾಶಿ ಕನಸುಗಳು ಆವಶ್ಯಕ ವಾಗಿದೆ’ ಎಂದು ತಿಳಿಸಿದರು.