Nipah Virus; ಕೇರಳಕ್ಕೆ ಅನಗತ್ಯ ಪ್ರವಾಸ ಬೇಡ; ಆರೋಗ್ಯ ಇಲಾಖೆ ಸುತ್ತೋಲೆ
Team Udayavani, Sep 16, 2023, 2:38 AM IST
ಕಲ್ಲಿಕೋಟೆ/ಬೆಂಗಳೂರು: ಕೇರಳದ ಕಲ್ಲಿಕೋಟೆಯಲ್ಲಿ ನಿಫಾ ಸೋಂಕುಪೀಡಿತರ ಸಂಖ್ಯೆ 6ಕ್ಕೆ ಏರಿದ್ದು, ರಾಜ್ಯದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರು ಕೇರಳಕ್ಕೆ ಅನಗತ್ಯವಾಗಿ ಹೋಗುವುದು ಬೇಡ ಎಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡದ ಜಿಲ್ಲೆಗಳ ವ್ಯಾಪ್ತಿಯಲ್ಲಿ “ಜ್ವರ ಕೇಂದ್ರ’ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ದೃಢಪಡುವ ಶಂಕಿತ ನಿಫಾ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಕಾಲ ಕಾಲಕ್ಕೆ ಒದಗಿಸುವಂತೆಯೂ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ| ರಣದೀಪ್ ಹೇಳಿದ್ದಾರೆ. ವೈರಾಣು ಸೋಂಕು ವರದಿಯಾದ ಸ್ಥಳಕ್ಕೆ ಭೇಟಿ ನೀಡಿದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿಯೂ ನಿಫಾ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದ ಆರೋಗ್ಯ ಸಿಬಂದಿಗಳಿಗೆ ನಿಫಾ ವೈರಸ್ ಚಿಕಿತ್ಸೆಗೆ ಸಂಬಂಧಿಸಿ ತರಬೇತಿ ನೀಡಲಾಗಿದೆ. ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳಿಗೆ ಜಾಗೃತರಾಗಲು ಸೂಚಿಸಲಾಗಿದೆ.
ಚಿಕಿತ್ಸೆಗೆ ವ್ಯವಸ್ಥೆ
ಕೇರಳದ ಜತೆಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡದ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಸೋಂಕುಪೀಡಿತರ ಚಿಕಿತ್ಸೆಗೆ 2 ಹಾಸಿಗೆ ಹಾಗೂ ಐಸಿಯು ಜತೆಗೆ ಶಂಕಿತ ವ್ಯಕ್ತಿಗಳ ಕ್ವಾರಂಟೈನ್ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
ನಿಫಾ ಸೋಂಕುಪೀಡಿತ ವ್ಯಕ್ತಿಗೆ ಅಗತ್ಯವಿರುವ ತುರ್ತು ಔಷಧ, ಆಮ್ಲಜನಕ, ಪಿಪಿಇ, ವಿಟಿಎಂ, ಇತರ ಸ್ಯಾಂಪಲ್ ಸಂಗ್ರಹಣೆಯ ಕಿಟ್ಗಳು ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ಶಂಕಿತ ವ್ಯಕ್ತಿಯ ಮಾದರಿಯನ್ನು ಪುಣೆಯ ವೈರಾಲಜಿ ಲ್ಯಾಬ್ಗ ರವಾನಿಸಲು ಅಗತ್ಯವಿರುವ ಮಾರ್ಗಸೂಚಿಯ ಪಾಲನೆ ಮಾಡುವಂತೆ ಆದೇಶ ಹೊರಡಿಸಿದೆ.
ಆರಕ್ಕೆ ಏರಿಕೆ
ನಿಫಾ ಕಾಣಿಸಿಕೊಂಡಿರುವ ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಮತ್ತೂಬ್ಬರಿಗೆ ಸೋಂಕು ತಗುಲಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಆರಕ್ಕೆ ಏರಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಅವಧಿಯಲ್ಲಿದ್ದ ಕಠಿನ ನಿಯಮಗಳು ಜಾರಿಯಾಗಿವೆ. ರಾಜಸ್ಥಾನದಲ್ಲಿಯೂ ನಿಫಾ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಪ್ರತಿಕಾಯ
ನಿಫಾ ಸೋಂಕಿನ ಚಿಕಿತ್ಸೆಗಾಗಿ ಅಗತ್ಯ ಇರುವ ಮೊನೊಕ್ಲೋನಲ್ ಪ್ರತಿಕಾಯವನ್ನು ಆಸ್ಟ್ರೇಲಿಯಾದಿಂದ ತರಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ರಾಜೀವ್ ಭಾಲ್ ಹೇಳಿದ್ದಾರೆ. 2018ರಲ್ಲಿಯೂ ಅದನ್ನು ತರಿಸಿಕೊಳ್ಳಲಾಗಿತ್ತು. ಆದರೆ ಅದನ್ನು ದೇಶದಲ್ಲಿ ಇದುವರೆಗೆ ಯಾರಿಗೂ ನೀಡಲಾಗಿಲ್ಲ ಎಂದಿದ್ದಾರೆ.