ದೇಶದಲ್ಲಿ ಮೀಸಲಾತಿ ಬದಲಿಸುವ ಅಧಿಕಾರ ಯಾರಿಗೂ ಇಲ್ಲ: ನಿತೀಶ್
Team Udayavani, Oct 4, 2018, 11:28 AM IST
ಪಟ್ನಾ : ಭಾರತೀಯ ಸಂವಿಧಾನದ ಪಿತಾಮಹಾ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಿದ್ಧಪಡಿಸಿ ದೇಶವು ಅಂಗೀಕರಿಸಿರುವ ಸಂವಿಧಾನದಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ಬದಲಾಯಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ಎಲ್ಲ ರಾಜಕಾರಣಿಗಳು ಜನಸಮೂಹವನ್ನು ಓಲೈಸುವ ಭರವಸೆಯ ಮಾತುಗಳನ್ನು ಆಡುವ ರೀತಿಯಲ್ಲೇ ನಿತೀಶ್ ಅವರೂ ಈ ಮಾತುಗಳನ್ನು ಆಡಿದ್ದಾರೆ.
ಪಟ್ನಾದ ಶ್ರೀ ಕೃಷ್ಣ ಮೆಮೋರಿಯಲ್ ಹಾಲ್ನಲ್ಲಿ ಜೆಡಿಯು ಏರ್ಪಡಿಸಿದ್ದ ದಲಿತ – ಮಹಾದಲಿತ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ನಿತೀಶ್, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಯವರಿಗೆ ಸಂವಿಧಾನದಲ್ಲಿ ನೀಡಲಾಗಿರುವ ಮೀಸಲಾತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಸಾಮಾಜಿಕ ಮಾದ್ಯಮಗಳ ಈ ಯುಗದಲ್ಲಿ ಕೇವಲ ವೈರಲ್ ಆಗಬೇಕೆಂಬ ಉದ್ದೇಶದಿಂದ ಜನರು ಅನಗತ್ಯ ಮತ್ತು ಅನಪೇಕ್ಷಿತ ಮಾತುಗಳನ್ನು ಆಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು “ಮೀಸಲಾತಿ’ ಕುರಿತಂತೆ ನೀಡಿರುವ ಪ್ರತಿಕ್ರಿಯೆಗೆ ಉತ್ತರವೆಂಬಂತೆ ನಿತೀಶ್ ಅವರು, “ಅನಗತ್ಯವಾಗಿ ಅಸಂಬದ್ಧ ಮಾತುಗಳನ್ನು ಅಭ್ಯಾಸ ಮಾಡಿಕೊಂಡಿರುವವರು ಅದನ್ನು ಮುಂದುವರಿಸುತ್ತಾರೆ ಮತ್ತು ಅದು ಅವರ ಮಟ್ಟಿಗೆ ಸಹಜವೇ ಆಗಿರುತ್ತದೆ’ ಎಂದು ಹೇಳಿದರು.