Padma Awards: 10 ಮಂದಿ ಕನ್ನಡಿಗರು ಸೇರಿದಂತೆ 132 ಮಂದಿಗೆ ಪದ್ಮ ಗೌರವ
ಐವರಿಗೆ ಪದ್ಮವಿಭೂಷಣ, 17 ಪದ್ಮಭೂಷಣ, 110 ಪದ್ಮಶ್ರೀ ಕರ್ನಾಟಕಕ್ಕಿಲ್ಲ ಪದ್ಮವಿಭೂಷಣ
Team Udayavani, Jan 26, 2024, 8:00 AM IST
ಹೊಸದಿಲ್ಲಿ: ನಿಸ್ವಾರ್ಥ ಸೇವೆಯ ಮೂಲಕ ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಕೊಡುಗೆ ನೀಡುತ್ತಿರುವ ಐವರು ಪದ್ಮವಿಭೂಷಣ, 17 ಮಂದಿ ಪದ್ಮಭೂಷಣ, 110 ಮಂದಿ ಸಾಧಕರು ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. ಈ ಬಾರಿಯೂ ಕೇಂದ್ರ ಸರಕಾರ ಪದ್ಮ ಪ್ರಶಸ್ತಿಗಳಿಗೆ ಎಲೆಮರೆಯ ಕಾಯಿಗಳನ್ನೇ ಆಯ್ಕೆ ಮಾಡಿದ್ದು, 10 ಮಂದಿ ಕನ್ನಡಿಗರ ಸಹಿತ ಒಟ್ಟು 132 ಮಂದಿ ಪ್ರತಿಷ್ಠಿತ ಪದ್ಮ ಪ್ರಶಸ್ತಿಯ ಖ್ಯಾತಿಯನ್ನು ಹೆಚ್ಚಿಸಿದ್ದಾರೆ.
ಸತತ 4 ದಶಕಗಳಿಂದ ಜೇನು ಕುರುಬ ಜನಾಂಗದ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ ಮೈಸೂರಿನ ಸೋಮಣ್ಣ, ಸ್ಟವ್ ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಶೇ. 50ರಷ್ಟು ಸುಟ್ಟಗಾಯಗಳಿಂದ ಬದುಕುಳಿದು, ತಾವೇ ಪ್ಲಾಸ್ಟಿಕ್ ಸರ್ಜನ್ ಆಗಿ ಬದಲಾದ ಬೆಂಗಳೂರು ಮೂಲದ ಪ್ರೇಮಾ ಧನ್ರಾಜ್ (72) ಹಾಗೂ ಬರೋಬ್ಬರಿ 650 ಬಗೆಯ ಸಾಂಪ್ರ ದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿರುವ ಕಾಸರಗೋಡಿನ ಸತ್ಯನಾರಾಯಣ ಬೆಳೇರಿ ಅವರಿಗೆ ಪದ್ಮಶ್ರೀ ಸಂದಿದೆ.
ಕ್ಯಾ| ಪ್ರಾಂಜಲ್ಗೆ ಮರಣೋತ್ತರ ಶೌರ್ಯ ಪ್ರಶಸ್ತಿ
2023ರ ನ. 22ರಂದು ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಮೈಸೂರಿನ ಕ್ಯಾ| ಎಂ.ವಿ. ಪ್ರಾಂಜಲ್ ಅವರಿಗೆ ಮರಣೋತ್ತರವಾಗಿ “ಶೌರ್ಯ ಪ್ರಶಸ್ತಿ’ ಘೋಷಿಸಲಾಗಿದೆ.
ಪದ್ಮಾ ಸುಬ್ರಹ್ಮಣ್ಯಂಗೆ ಪದ್ಮವಿಭೂಷಣ
ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಕೂಡ ಪ್ರಕಟಿಸಲಾಗಿದ್ದು, ಬಿಜೆಪಿ ನಾಯಕ ರಾಮ ನಾಯಕ್, ಗಾಯಕಿ ಉಷಾ ಉತ್ತುಪ್, ದೇಶದ ಫಾತಿಮಾ ಬೀವಿ, ನಟ ಮಿಥುನ್ ಚಕ್ರವರ್ತಿ, ಹೊರ್ಮುಸ್ಜಿ ಎನ್. ಕಾಮಾ, ವಿಜಯಕಾಂತ್ ಸಹಿತ 17 ಮಂದಿಗೆ ಪದ್ಮಭೂಷಣ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಹೆಸರಾಂತ ಭರತನಾಟ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯಂ, ಚಿರಂಜೀವಿ, ಭರತನಾಟ್ಯ ಪಟು ವೈಜಯಂತಿ ಬಾಲಿ, ಬಿಂದೇಶ್ವರ ಪಾಠಕ್ ಸಹಿತ ಐವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: Horoscope: ಉದ್ಯೋಗ ಸ್ಥಾನದ ಹೊಸ ಜವಾಬ್ದಾರಿ ಸಮಾಧಾನಕರವಾಗಿರಲಿದೆ