ಅಂಬೇಡ್ಕರ್ ಜಾಕೆಟ್ ಬಣ್ಣ ಬದಲು!
Team Udayavani, Apr 11, 2018, 10:30 AM IST
ಬಡಾನ್ (ಉತ್ತರಪ್ರದೇಶ): ಸಂವಿಧಾನ ಶಿಲ್ಪಿ ಭೀಮರಾವ್ ಅಂಬೇಡ್ಕರ್ ಅವರ ಐದು ಅಡಿ ಪ್ರತಿಮೆಯೊಂದನ್ನು ಉತ್ತರಪ್ರದೇಶದ ಕುವಾರ್ಗಾವ್ ಎಂಬ ಹಳ್ಳಿಯಲ್ಲಿ ಪ್ರತಿಷ್ಠಾಪಿಸಿದ್ದು ಹಳೆಯ ಸುದ್ದಿ. ಆದರೆ ಇದೀಗ ಅದೇ ಪ್ರತಿಮೆ ರಾಜಕೀಯ ಕಾರಣಕ್ಕಾಗಿ ಮತ್ತೆ ಸುದ್ದಿಯಾಗುತ್ತಿದೆ!
ಕಾರಣ ಇಷ್ಟೆ, ಅಂಬೇಡ್ಕರ್ ಪ್ರತಿಮೆ ಧ್ವಂಸವಾಗುವ ಮುನ್ನ ಅದರಲ್ಲಿನ ಜಾಕೆಟ್ ಬಣ್ಣ ನೀಲಿಯಾಗಿತ್ತು. ಆದರೆ, ಹೊಸದಾಗಿ ಪ್ರತಿಷ್ಠಾಪಿಸಿದ ಪ್ರತಿಮೆಯ ಜಾಕೆಟ್ಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇದಕ್ಕೆ ಹಲವರಿಂದ ತೀವ್ರ ಆಕ್ಷೇಪ ಕೇಳಿಬಂದಿದ್ದು, ಕೊನೆಗೆ ಸ್ಥಳೀಯಾಡಳಿತ ಮಂಗಳವಾರ ಬೆಳಗ್ಗೆ ಜಾಕೆಟ್ಗೆ ಮತ್ತೆ ನೀಲಿ ಬಣ್ಣ ಬಳಿದಿದೆ. ಕೇಸರಿ ಬಣ್ಣ ಹಿಂದುತ್ವವನ್ನು ಪ್ರತಿಪಾದಿಸುತ್ತದೆ ಎನ್ನುವುದು ಅಂಬೇಡ್ಕರ್ರ ಕೆಲ ಅಭಿಮಾನಿ ಆಕ್ಷೇಪವಾಗಿತ್ತು. ಆದರೆ, ನಾವು ಮೊದಲು ಆಯ್ಕೆ ಮಾಡಿದ್ದ ಪ್ರತಿಮೆ ಕೇವಲ 3 ಅಡಿ ಇತ್ತು. ಅದಕ್ಕೆ 5 ಅಡಿಯ ಕೇಸರಿ ಜಾಕೆಟ್ ಇದ್ದ ಪ್ರತಿಮೆ ಖರೀದಿಸಲಾಯಿತು. ನೀಲಿ ಬಣ್ಣ ಬಳಿಯುವ ಉದ್ದೇಶದಿಂದ ನೀಲಿ ಪೇಂಟ್ ಕೂಡ ತರಲಾಗಿತ್ತು. ಆದರೆ, ಬಣ್ಣ ಬಳಿಯುವ ಮೊದಲೇ ಪ್ರತಿಮೆ ಪ್ರತಿಷ್ಠಾಪಿಸಿದ್ದರಿಂದ ಇಷ್ಟೆಲ್ಲ ರಾದ್ಧಾಂತ ಆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.