ವಿದ್ಯಾರ್ಥಿಗಳ ರಕ್ಷಣೆಗೆ ಹೈಕೋರ್ಟಿಗೆ ಮೊರೆ
Team Udayavani, Mar 1, 2022, 5:55 AM IST
ಕೊಚ್ಚಿ: ಯುದ್ಧಗ್ರಸ್ಥ ಉಕ್ರೇನ್ ನಲ್ಲಿ ಸಿಲುಕಿರುವ ಕೇರಳದ ವಿದ್ಯಾರ್ಥಿಗಳನ್ನು ಹುಟ್ಟೂರಿಗೆ ಕರೆ ತರಲು ಕೇಂದ್ರದ ವಿದೇಶ ವ್ಯವಹಾರ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಕೇರಳ ಹೈಕೋರ್ಟ್ ಅಡ್ವೊಕೇಟ್ಸ್ ಅಸೋಸಿಯೇಶನ್ (ಕೆಎಚ್ಸಿಎಎ) ರಾಜ್ಯದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಬುಧವಾರದ ಕಲಾಪದ ಆರಂಭದಲ್ಲೇ ವಿಚಾರಣೆಗೆ ಪರಿಗಣಿಸಲು ಕೋರ್ಟ್ ನಿರ್ಧರಿಸಿದೆ.
ಉಕ್ರೇನ್ನಲ್ಲಿ ಭಾರತೀಯ ರಾಯಭಾರಿಗಳ ಉಪಸ್ಥಿತಿ ಕೊರತೆಯಿಂದ ದೇಶದ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಸ್ವಂತ ಖರ್ಚಿನಲ್ಲಿ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿಯೇ ಗಡಿಭಾಗಕ್ಕೆ ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ.
ನಮ್ಮ ವಿದ್ಯಾರ್ಥಿಗಳು ಉಕ್ರೇನ್ ಸೈನಿಕರು ಮತ್ತು ಗಡಿ ಗಸ್ತು ಪಡೆಯಿಂದ ಪಕ್ಷಪಾತ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇವರು ಗಡಿ ಭಾಗಕ್ಕೆ ತೆರಳುವುದನ್ನು ತಡೆಯಲು ಅಲ್ಲಿನ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸುವುದು, ಪೆಪ್ಪರ್ ಸ್ಪ್ರೆ ಬಳಸುವುದು ಮುಂತಾದವುಗಳನ್ನು ಮಾಡುತ್ತಿದ್ದಾರೆ. ಕೊರೆಯುವ ಚಳಿಯಲ್ಲಿ ವಿದ್ಯಾರ್ಥಿಗಳು ತಾಸುಗಟ್ಟಲೆ ನಿಲ್ಲುವಂತಾಗಿದೆ. ಅವರ ರಕ್ಷಣೆಗೆ ನಿರ್ದೇಶನ ನೀಡುವಂತೆ ಕೋರಲಾಗಿದೆ.