ಶೇ.10 ಮೀಸಲು ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ
ಮಧ್ಯಪ್ರದೇಶ ಕಾಂಗ್ರೆಸ್ ನಾಯಕಿಯಿಂದ ಮೇಲ್ಮನವಿ
Team Udayavani, Nov 24, 2022, 12:22 AM IST
ಹೊಸದಿಲ್ಲಿ: ಆರ್ಥಿಕವಾಗಿ ದುರ್ಬಲ ವರ್ಗ(ಇಡಬ್ಲ್ಯುಎಸ್) ದವರಿಗೆ ಶೇ.10 ಮೀಸಲಾತಿಯನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಕೋರಿ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕಿಯೊಬ್ಬರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ.
103ನೇ ತಿದ್ದುಪಡಿಯು ಸಂವಿಧಾನದ ಮೂಲ ಆಶಯವನ್ನೇ ಬದಲಿಸುತ್ತದೆ. ಹಿಂದುಳಿದ ವರ್ಗಗಳನ್ನು ಕೇವಲ ಆರ್ಥಿಕ ಮಾನದಂಡದ ಮೇರೆಗೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಮೇಲ್ವರ್ಗದವರಿಗೆ ಮಾತ್ರ ಶೇ.10 ಮೀಸಲಾತಿ ಒದಗಿಸುವುದು ಸಂವಿಧಾನದಲ್ಲಿರುವ ಸಮಾನತಾ ಸಂಹಿತೆಯ ಉಲ್ಲಂಘನೆಯಾಗಿದೆ. ಇದು ತಾರತಮ್ಯಕ್ಕೂ ಕಾರಣವಾಗುತ್ತದೆ ಎಂದು ಅರ್ಜಿದಾರೆ ಜಯಾ ಠಾಕೂರ್ ಹೇಳಿದ್ದಾರೆ.
ಇಷ್ಟು ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿದ್ದರೂ, ಈಗಲೂ ಕೇಂದ್ರ ಸರಕಾರಿ ಸೇವೆಯಲ್ಲಿರುವ ಎಸ್ಸಿ, ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗ(ಒಬಿಸಿ)ಗಳ ಪ್ರಮಾಣ ಕೇವಲ ಶೇ.47.46ರಷ್ಟು ಮಾತ್ರವೇ ಇದೆ. ಮಧ್ಯಪ್ರದೇಶದಲ್ಲಿ ಒಬಿಸಿ ಜನಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚಿದೆ. ಆದರೆ ಅವರಿಗಿರುವ ಮೀಸಲಾತಿ ಕೇವಲ ಶೇ.13. ಎಸ್ಸಿ ಸಮುದಾಯದ ಜನಸಂಖ್ಯೆ ಶೇ.16ರಷ್ಟಿದ್ದರೂ, ಅವರಿಗೆ ಸಿಗುತ್ತಿರುವ ಮೀಸಲಾತಿ ಶೇ.16, ಎಸ್ಟಿಗಳ ಜನಸಂಖ್ಯೆ ಶೇ.20ರಷ್ಟಿದ್ದು, ಅವರಿಗೆ ಶೇ.20ರಷ್ಟು ಮೀಸಲಾತಿ ಸಿಗುತ್ತಿದೆ. ರಾಜ್ಯದಲ್ಲಿ ಮೇಲ್ವರ್ಗದ ಜನಸಂಖ್ಯೆ ಇರುವುದು ಕೇವಲ ಶೇ.6ರಷ್ಟು. ಆದರೆ ಅವರಿಗೆ ಶೇ.10 ಮೀಸಲಾತಿ ನೀಡುತ್ತಿರುವುದು ಎಷ್ಟು ಸರಿ ಎಂದೂ ಅರ್ಜಿದಾರರು ಪ್ರಶ್ನಿಸಿದ್ದಾರೆ.