ರಜನಿಗೆ ತಟ್ಟಿದ ರಾಜಕೀಯ ಬಿಸಿ
Team Udayavani, Mar 25, 2018, 7:00 AM IST
ಚೆನ್ನೈ: ರಾಜಕೀಯ ಪ್ರವೇಶಿಸಿದ ಬೆನ್ನಲ್ಲೇ ಕನ್ನಡ ಚಿತ್ರ ನಟ ಉಪೇಂದ್ರ ಅವರ ಕೆಪಿಜೆಪಿ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಂತೆಯೇ, ಅತ್ತ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ರಾಜಕೀಯ ಪ್ರವೇಶಕ್ಕೂ ಮುನ್ನವೇ ಅದರ ಬಿಸಿ ತಟ್ಟಿದೆ.
ತಮ್ಮದೇ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸುವ ಉದ್ದೇಶಕ್ಕಾಗಿ “ರಜನಿ ಮಕ್ಕಳ್ ಮಂದ್ರಂ’ ಸಂಘಟನೆಗೆ ಚಾಲನೆ ನೀಡಿರುವ ರಜನಿಕಾಂತ್, ತಮ್ಮ ಪಕ್ಷದ ಆಶಯಗಳಿಗೆ ತಕ್ಕಂತೆ ವರ್ತಿಸಿಲ್ಲ ಎಂಬ ಕಾರಣಕ್ಕಾಗಿ “ಮಂದ್ರಂ’ನ ದಿಂಡಿಗಲ್ ಜಿಲ್ಲೆಯ ಕಾರ್ಯದರ್ಶಿ ಎಸ್.ಎಂ. ತಂಬುರಾಜ್ ಅವರನ್ನು ಅಮಾನತುಗೊಳಿಸಿದ್ದಾರೆ. ಇದನ್ನು ಪ್ರತಿಭಟಿಸಿರುವ ದಿಂಡಿಗಲ್ನ 107 “ಮಂದ್ರಂ’ ಸಹಚರರು, ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಬೆದರಿಕೆ ಹಾಕಿದ್ದು, ಬಿಕ್ಕಟ್ಟಿಗೆ ಕಾರಣವಾಗಿದೆ. 40 ವರ್ಷಗಳಿಂದ ರಜನಿಯ ಕಟ್ಟಾ ಅಭಿಮಾನಿಯಾಗಿದ್ದ ತಂಬುರಾಜ್, ಮಂದ್ರಂ ಸ್ಥಾಪನೆಗೆ ಹೆಗಲು ಕೊಡಲು, ತಮ್ಮ ಸರಕಾರಿ ನೌಕರಿಗೆ ರಾಜೀನಾಮೆ ಸಲ್ಲಿಸಿ ರಜನಿ ಜತೆ ಕೈಜೋಡಿಸಿದ್ದರು. ಅವರ ವಿರುದ್ಧದ ಕ್ರಮ ಸರಿಯಲ್ಲ ಎಂದಿದ್ದಾರೆ ಸದಸ್ಯರು.