ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಅಭಿನಂದನೆ ಸಲ್ಲಿಸಬೇಕು: ಯೋಗಿ
Team Udayavani, Mar 19, 2019, 11:56 AM IST
ಲಕ್ನೋ: ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ವಾದ್ರಾ ಮೊತ್ತ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಯಾಕೆಂದರೆ ಗಂಗಾ ನದಿಯನ್ನು ಸ್ವಚ್ಛಗೊಳಿಸಿದ್ದರ ಪರಿಣಾಮ ಪ್ರಿಯಾಂಕಾ ಗಾಂಧಿ ಗಂಗಾ ಯಾತ್ರೆ ನಡೆಸಲು ಸಾಧ್ಯವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿಯ ಗಂಗಾ ಯಾತ್ರೆಯ ಕುರಿತು ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷ ಮಾಡದ ಅಭಿವೃದ್ಧಿ ಕಾರ್ಯವನ್ನು ಪ್ರಯಾಗ್ ರಾಜ್ ನಿಂದ ವಾರಣಾಸಿವರೆಗೆ ಬಿಜೆಪಿ ಸರ್ಕಾರ ಮಾಡಿರುವುದು ಸಾಬೀತಾಗಿದೆ ಎಂದು ಹೇಳಿದರು.
ಅಷ್ಟೇ ಅಲ್ಲ ಗಂಗಾ ಯಾತ್ರೆಯಲ್ಲಿ ರಾಹುಲ್ ಜೀ ಹಾಗೂ ಸಮಾಜವಾದಿ ಪಕ್ಷ ಮತ್ತು ಬಹುಜನ್ ಸಮಾಜ್ ಪಕ್ಷದ ಮುಖಂಡರನ್ನು ಕೂಡಾ ಜೊತೆಗೆ ಕರೆದೊಯ್ಯಬೇಕಿತ್ತು. ಗಂಗಾ ಯಾತ್ರೆಯನ್ನು ಸಾಧ್ಯವಾಗಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ನಮಾಮಿ ಗಂಗಾ ಯೋಜನೆ ಬಗ್ಗೆ ಪ್ರಿಯಾಂಕಾ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.