ರಫೇಲ್ನಿಂದ ಮೋದಿಗೆ ಮಗದೊಮ್ಮೆ ಅಧಿಕಾರ
Team Udayavani, Jan 5, 2019, 12:30 AM IST
ಹೊಸದಿಲ್ಲಿ: ಬೋಫೋರ್ಸ್ ಹಗರಣದಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಆದರೆ ರಫೇಲ್ ಒಪ್ಪಂದದಿಂದಾಗಿ ನರೇಂದ್ರ ಮೋದಿ ಮತ್ತೂಮ್ಮೆ ಅಧಿಕಾರಕ್ಕೇರಲಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ರಫೇಲ್ ಒಪ್ಪಂದದಲ್ಲಿ ಕಾಂಗ್ರೆಸ್ಗೆ ಹಣ ಸಿಗದೇ ಇದ್ದುದರಿಂದ ಒಪ್ಪಂದ ಅಂತಿಮಗೊಳಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಯುಪಿಎ ಅಧಿಕಾರದಲ್ಲಿದ್ದಾಗ ಎಚ್ಎಎಲ್ ಸಾಮರ್ಥ್ಯ ಹೆಚ್ಚಳ ಮಾಡಲು ಗಮನ ಹರಿಸದ ಕಾಂಗ್ರೆಸ್, ಈಗ ರಫೇಲ್ ಯುದ್ಧ ವಿಮಾನ ಒಪ್ಪಂದದಿಂದ ಎಚ್ಎಎಲ್ ಕೈಬಿಟ್ಟಿದ್ದಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಆದರೆ ಎಚ್ಎಎಲ್ಗೆ ಎನ್ಡಿಎ ಸರಕಾರ 1 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದಗಳನ್ನು ನೀಡಿದೆ ಎಂದಿ ದ್ದಾರೆ. ನೀವು ನಿಮ್ಮದೇ ಕ್ಷೇತ್ರ ಅಮೇಠಿಯಲ್ಲಿ ರುವ ಎಚ್ಎಎಲ್ಗೆ ಹೋಗಿ, ಯಾವ ಕೊರತೆ ಇದೆ ಎಂದು ಕೇಳಲಿಲ್ಲ. ಬದಲಿಗೆ ಬೆಂಗಳೂರಿನ ಎಚ್ಎಎಲ್ಗೆ ಹೋಗಿ ಮೊಸಳೆ ಕಣ್ಣೀರು ಸುರಿಸುತ್ತೀರಿ ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ಅಗಸ್ಟಾ ಕಾಪ್ಟರ್ ಹಗರಣವನ್ನು ಉಲ್ಲೇಖೀಸಿದ ನಿರ್ಮಲಾ, ಯಾಕೆ ವಿವಿಐಪಿ ಕಾಪ್ಟರ್ಗಳ ನಿರ್ಮಾಣದ ಆರ್ಡರನ್ನು ಎಚ್ಎಎಲ್ಗೆ ನೀಡದೇ, ಅಗಸ್ಟಾ ವೆಸ್ಟ್ಲ್ಯಾಂಡ್ಗೆ ನೀಡಿದಿರಿ ಎಂದು ಕಾಂಗ್ರೆಸ್ಗೆ ಮರುಪ್ರಶ್ನೆ ಹಾಕಿದ್ದಾರೆ.
“ಡೀಲ್’ನಲ್ಲಿದೆ ವ್ಯತ್ಯಾಸ: “ರಕ್ಷಣಾ ಡೀಲ್’ ಮತ್ತು “ರಕ್ಷಣಾ ಒಪ್ಪಂದದಲ್ಲಿ ಡೀಲ್’ ಎಂಬುದು ಬೇರೆ ಬೇರೆ ಸಂಗತಿಗಳು. ಮೋದಿ ನೇತೃತ್ವದ ಸರಕಾರವು ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಿದ್ದು, ರಕ್ಷಣಾ ಡೀಲ್ ಮಾಡಿಕೊಂಡಿದೆ. ಎನ್ಡಿಎ ಸರಕಾರವು 126 ರಫೇಲ್ ಜೆಟ್ಗಳ ಖರೀದಿಯನ್ನು 36 ಕ್ಕೆ ಇಳಿಕೆ ಮಾಡಿದೆ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ವಾಸ್ತವವಾಗಿ ಯುಪಿಎ ಕಾಲದಲ್ಲಿ, ಸಿದ್ಧವಾದ 18 ಜೆಟ್ಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ ನಾವು ಅದನ್ನು 36ಕ್ಕೆ ಏರಿಸಿದ್ದೇವೆ ಎಂದು ನಿರ್ಮಲಾ ಹೇಳಿದ್ದಾರೆ. ರಫೇಲ್ ವಿಮಾನದ ಮೂಲ ಬೆಲೆ ಯುಪಿಎ ಸರಕಾರದ ಒಪ್ಪಂದದಲ್ಲಿ 737 ಕೋಟಿ ರೂ.ಆಗಿತ್ತು. ಪ್ರಸ್ತುತ ಒಪ್ಪಂದದಲ್ಲಿ ಪ್ರತಿ ವಿಮಾನದ ಬೆಲೆ 670 ಕೋಟಿ ರೂ. ಆಗಿರಲಿದೆ ಎಂದು ನಿರ್ಮಲಾ ಹೇಳಿದ್ದಾರೆ.
ಅಧಿಕಾರಕ್ಕೆ ಬಂದರೆ ತನಿಖೆ: ನಿರ್ಮಲಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಹುಲ್, ನನ್ನ ಯಾವ ಪ್ರಶ್ನೆಗೂ ರಕ್ಷಣಾ ಸಚಿವೆ ಉತ್ತರಿಸಲಿಲ್ಲ. ಅಲ್ಲದೆ, ಎಚ್ಎಎಲ್ ಬದಲಿಗೆ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿಗೆ ಯಾಕೆ ಒಪ್ಪಂದ ನೀಡಲಾಗಿದೆ ಎಂದೂ ಸ್ಪಷ್ಟಪಡಿಸಲಿಲ್ಲ ಎಂದರು. ಅಷ್ಟೇ ಅಲ್ಲದೆ, ಪ್ರಧಾನಿ ಸ್ನೇಹಿತರಿಗೆ ಒಪ್ಪಂದ ನೀಡಲಾಗಿದೆ. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. 2019ರಲ್ಲಿ ನಾವು ಅಧಿಕಾರಕ್ಕೆ ಬಂದರೆ ರಫೇಲ್ ಒಪ್ಪಂದದ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ. ಇದರಲ್ಲಿ ಹಗರಣ ನಡೆದಿದೆ ಎಂದರು.
ಹೊಸ ಆರೋಪ: ರಫೇಲ್ ವಿಚಾರದಲ್ಲಿ ದಿನವೂ ಹೊಸ ಹೊಸ ಆರೋಪ ಮಾಡುತ್ತಿರುವ ಕಾಂಗ್ರೆಸ್, ರಕ್ಷಣಾ ಸಚಿವಾಲಯ ಹಾಗೂ ಕಾನೂನು ಸಚಿವಾಲಯದ ಅಧಿಕಾರಿಗಳೇ ಈ ಒಪ್ಪಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಒಪ್ಪಂದ ಅಂತಿಮಗೊಳಿಸಲಾಗಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ ರಚಿಸಿ ಅದರ ಎದುರು ಎಲ್ಲ ವಿವರಗಳನ್ನೂ ಬಹಿರಂಗಗೊಳಿ ಸಬೇಕು ಎಂದು ಆಗ್ರಹಿಸಿದೆ.
ಕುಂಭಮೇಳಕ್ಕೆ ಬಂದು ಪಾಪ ತೊಳೆದುಕೊಳ್ಳಿ
ರಫೇಲ್ ಕುರಿತು ಹೇಳಿರುವ ಸುಳ್ಳುಗಳ ಪಾಪವನ್ನು ಕುಂಭಮೇಳಕ್ಕೆ ಆಗಮಿಸಿ ತೊಳೆದುಕೊಂಡು ಹೋಗಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಉತ್ತರ ಪ್ರದೇಶ ಆರೋಗ್ಯ ಸಚಿವ ಸಿದ್ದಾರ್ಥ ನಾಥ ಸಿಂಗ್ ಹೇಳಿದ್ದಾರೆ. ಗಂಗಾ ಮಾತೆಯು ರಾಹುಲ್ರ ಎಲ್ಲ ಪಾಪಗಳನ್ನೂ ತೊಳೆಯುತ್ತಾಳೆ. ಕಳೆದ ಎರಡು ವರ್ಷಗಳಿಂದಲೂ ಅವರು ರಫೇಲ್ ಕುರಿತು ಸುಳ್ಳು ಹೇಳುತ್ತಿದ್ದಾರೆ. ಇದರ ಪಾಪವನ್ನು ಅವರು ಇಲ್ಲಿ ತೊಳೆದುಕೊಳ್ಳಬಹುದು ಎಂದಿದ್ದಾರೆ.
ಮತ್ತೆ ಸಂಸತ್ತಲ್ಲಿ ಕಣ್ಣು ಮಿಟುಕಿಸಿದ ರಾಹುಲ್
ಈ ಹಿಂದೆ ಸಂಸತ್ನಲ್ಲಿ ಕಣ್ಣು ಮಿಟುಕಿಸಿ ಅಪಹಾಸ್ಯಕ್ಕೀಡಾಗಿದ್ದ ರಾಹುಲ್ ಗಾಂಧಿ, ಶುಕ್ರವಾರ ರಫೇಲ್ ಕುರಿತ ಚರ್ಚೆಯಲ್ಲೂ ಕಣ್ಣು ಮಿಟುಕಿಸಿದ್ದು ಸುದ್ದಿಯಾಗಿದೆ. ಉಪ ಸಭಾಪತಿ ತಂಬಿದೊರೈ ರಫೇಲ್ ಬಗ್ಗೆ ಮಾತ ನಾ ಡುತ್ತಿದ್ದಾಗ ರಾಹುಲ್ ಅವರ ಹಿಂದೆ ಕುಳಿತಿದ್ದರು. ಈ ವೇಳೆ ಹಿಂದಿನ ಸೀಟಿನಲ್ಲಿ ಕೂತ ಸಂಸದರು ರಾಹುಲ್ ಉದ್ದೇಶಿಸಿ ಏನನ್ನೋ ಹೇಳಿದಾಗ ಅವರತ್ತ ತಿರುಗಿ ಕಣ್ಣು ಹೊಡೆದಿದ್ದನ್ನು ಕ್ಯಾಮೆರಾ ಕಣ್ಣು ದಾಖಲಿಸಿ ಕೊಂಡಿದೆ. ಇದೀಗ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು