ಗೆಹ್ಲೋಟ್ ವಿರುದ್ಧ ಸಿಡಿದ ಪೈಲಟ್ ; ಪತನದ ಭೀತಿಯಲ್ಲಿ ರಾಜಸ್ಥಾನ ಕಾಂಗ್ರೆಸ್ ಸರಕಾರ
Team Udayavani, Jul 13, 2020, 6:16 AM IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್.
ಹೊಸದಿಲ್ಲಿ/ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ರಾಜ್ಯ ಕಾಂಗ್ರೆಸ್ ಘಟಕ ಹೋಳಾಗುವ ಸ್ಥಿತಿ ತಲುಪಿದೆಯಲ್ಲದೆ ಸರಕಾರವೂ ಪತನ ಹೊಂದುವ ಲಕ್ಷಣಗಳು ಗೋಚರಿಸಿವೆ.
ಇದರ ಮಧ್ಯೆಯೇ ಹಾನಿ ಸರಿಪಡಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ತತ್ಕ್ಷಣವೇ ಜೈಪುರಕ್ಕೆ ಮರಳುವಂತೆ ಸಚಿನ್ ಪೈಲಟ್ಗೆ ಸೂಚಿಸಿದೆ. ಗೆಹ್ಲೋಟ್ ಅಡಿಯಲ್ಲೇ ಕೆಲಸ ಮಾಡುವಂತೆಯೂ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಇದರ ಜತೆಗೆ ಮೂವರು ವೀಕ್ಷಕರನ್ನು ಜೈಪುರಕ್ಕೆ ಕಳುಹಿಸಲಾಗಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ ಸಿಎಂ ನಿವಾಸದಲ್ಲಿ ಸಭೆ ನಡೆಯಲಿದೆ.
ಸಚಿನ್ ಪೈಲಟ್ ಅವರು ರವಿವಾರ ಸಂಜೆ ರಾಹುಲ್ ಗಾಂಧಿ ಜತೆಗೂ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ವಾಪಸ್ ತೆರಳುವಂತೆ ರಾಹುಲ್ ಅವರೂ ಸೂಚಿಸಿದರು ಎನ್ನಲಾಗಿದೆ.
30 ಶಾಸಕರ ಬೆಂಬಲವಿದೆ: ಸಚಿನ್
‘ನನ್ನ ಬೆಂಬಲಕ್ಕೆ 30 ಶಾಸಕರಿದ್ದಾರೆ. ಗೆಹ್ಲೋಟ್ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಸಿಎಂ ಸೋಮವಾರ ಕರೆದಿರುವ ಪಕ್ಷದ ಶಾಸಕಾಂಗ ಸಭೆಗೆ ತಾವು ಹಾಜರಾಗುವುದಿಲ್ಲ’ ಎಂದೂ ಸಚಿನ್ ತಿಳಿಸಿದ್ದಾರೆ. ಈ ನಡುವೆ, ಪೈಲಟ್ ಜತೆ ದಿಲ್ಲಿಗೆ ತೆರಳಿದ್ದ ಮೂವರು ಶಾಸಕರು ರವಿವಾರ ರಾತ್ರಿ ಜೈಪುರಕ್ಕೆ ಹಿಂದಿರುಗಿದ್ದು, ಕಾಂಗ್ರೆಸ್ನಲ್ಲೇ ಇರುವುದಾಗಿ ತಿಳಿಸಿದ್ದಾರೆ.
ಆಂತರಿಕ ಮೂಲಗಳು ಹೇಳುವುದೇನು?
ರಾಜಸ್ಥಾನ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ಗೆಹ್ಲೋಟ್ ಜತೆಗೆ ಸಚಿನ್ ಸಂಬಂಧ ಉತ್ತಮವಾಗಿಲ್ಲ. ಅದರ ಪರಿಣಾಮವಾಗಿ ಮಧ್ಯಪ್ರದೇಶದಲ್ಲಿ ನಡೆದಂತೆ ರಾಜಸ್ಥಾನದಲ್ಲಿಯೂ ಕೆಲವು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು ಎಂದು ಮೂಲಗಳು ತಿಳಿಸಿವೆ.
ಲಾಕ್ಡೌನ್ ಆರಂಭಕ್ಕೂ ಮುನ್ನವೇ ಸಚಿನ್ ಪೈಲಟ್ ಮತ್ತು ಬಿಜೆಪಿ ನಾಯಕರ ನಡುವೆ ಮಾತುಕತೆ ನಡೆಯುತ್ತಿತ್ತು. ಆಗ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರಕಾರ ಕೆಡವಿದರೆ ಸಚಿನ್ ಪೈಲಟ್ಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಬಿಜೆಪಿ ಅದಕ್ಕೆ ಸಿದ್ಧವಿಲ್ಲ. ಬಿಜೆಪಿಯ ಈ ನಿಲುವು ಸಚಿನ್ಗೆ ಇಷ್ಟವಾಗಿಲ್ಲ. ಅಂಥ ಸಂದರ್ಭ ಬಂದರೆ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಲು ಪೈಲಟ್ ಆಲೋಚಿಸಿದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್ನ ಕೆಲವು ನಾಯಕರು ಹೇಳಿದ್ದಾರೆ.
ಕಪಿಲ್ ಸಿಬಲ್ ಆತಂಕ
ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ಪಕ್ಷದೊಳಗೆ ಭಿನ್ನಮತ ತಲೆದೋರಿದಾಗ ಪಕ್ಷದ ಕೇಂದ್ರ ನಾಯಕತ್ವ ಬೇಗನೇ ಎಚ್ಚೆತ್ತುಕೊಂಡು ಅದನ್ನು ಶಮನಗೊಳಿಸಲು ಪ್ರಯತ್ನಿಸಬೇಕು. ಪರಿಸ್ಥಿತಿ ಕೈ ಮೀರಿದಾಗ ಪ್ರಯತ್ನಿಸಿದರೆ ಅದು ಸಾಧ್ಯವಾಗದು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಸಿಂಧಿಯಾ ಖೇದ
ರಾಜಸ್ಥಾನ ಕಾಂಗ್ರೆಸ್ನಲ್ಲಿ ಭುಗಿಲೆದ್ದಿರುವ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ, ನಾನು ಮತ್ತು ಸಚಿನ್ ಹಳೆಯ ಸ್ನೇಹಿತರು. ಕಾಂಗ್ರೆಸ್ ನನ್ನನ್ನೂ ಈ ಹಿಂದೆ ಮೂಲೆಗುಂಪಾಗಿಸಿತ್ತು. ಈಗ ಮಿತ್ರ ಸಚಿನ್ ಅವರನ್ನೂ ಮೂಲೆಗುಂಪಾಗಿಸಿರುವುದು ಬೇಸರ ತರಿಸಿದೆ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಸಿಂಧಿಯಾ ಇದೇ ವರ್ಷದ ಆರಂಭದಲ್ಲಿ ಪಕ್ಷ ತೊರೆದು ಬೆಂಬಲಿಗರೊಡನೆ ಬಿಜೆಪಿ ಸೇರಿದ್ದರು. ಆ ಬೆಳವಣಿಗೆಯಿಂದಾಗಿ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಮಲ್ನಾಥ್ ನೇತೃತ್ವದ ಸರಕಾರ ಪತನಗೊಂಡಿತ್ತು.
ವಿವಾದದ ಕಿಡಿ ಹೊತ್ತಿಸಿದ ನೋಟಿಸ್?
ಇತ್ತೀಚೆಗಿನ ರಾಜ್ಯಸಭಾ ಚುನಾವಣೆ ವೇಳೆ ಮೂವರು ಪಕ್ಷೇತರ ಶಾಸಕರು ಕಾಂಗ್ರೆಸ್ ಶಾಸಕರಿಗೆ ಲಂಚ ನೀಡಲು ಮುಂದಾಗಿದ್ದ ವಿಚಾರ ವಿವಾದ ಸೃಷ್ಟಿಸಿತ್ತು. ಹೀಗಾಗಿ ಆ ಪ್ರಕರಣವನ್ನು ರಾಜಸ್ಥಾನ ಸರಕಾರದ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿದೆ. ಇದರ ಜತೆಯಲ್ಲೇ ರಾಜಸ್ಥಾನ ಪೊಲೀಸ್ ಇಲಾಖೆಯಿಂದ ವಿಶೇಷ ಕಾರ್ಯಪಡೆ (ಎಸ್ಪಿಜಿ) ರಚಿಸಿ ಆ ಮೂಲಕವೂ ತನಿಖೆ ನಡೆಸಲಾಗುತ್ತಿದೆ.
ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಡಿಸಿಎಂ ಸಚಿನ್ ಪೈಲಟ್ ಅವರ ಹೇಳಿಕೆ ಪಡೆಯಲು ಮುಂದಾಗಿರುವ ಎಸ್ಪಿಜಿ ಅವರಿಬ್ಬರಿಗೂ ನೋಟಿಸ್ ಜಾರಿಗೊಳಿಸಿದೆ. ಅಧಿಕಾರಿಗಳು ಬಂದು ಸಚಿನ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದು ಸಚಿನ್ ಅವರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.
ಇಂದಿನ ದಿನಗಳಲ್ಲಿ ಬಿಜೆಪಿ ವಾಮಮಾರ್ಗಗಳ ಮೂಲಕ ಅಧಿಕಾರ ಪಡೆಯುವುದರಲ್ಲಿ ನಿರತವಾಗಿದೆ. ಕಳೆದ ವರ್ಷ ಕರ್ನಾಟಕದಲ್ಲಿ ಮಾಡಿದ್ದನ್ನೇ ಈ ವರ್ಷ ಮಧ್ಯಪ್ರದೇಶದಲ್ಲಿ ಮಾಡಿತ್ತು. ಈಗ ರಾಜಸ್ಥಾನದಲ್ಲೂ ಅದನ್ನೇ ಮುಂದುವರಿಸಿದೆ.
– ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್