Rajasthan Election; ಬಿಜೆಪಿಯ ‘ಪರಿವರ್ತನ್ ಸಂಕಲ್ಪ ಯಾತ್ರೆ’ಯನ್ನು ತಡೆದ ಪೊಲೀಸರು
Team Udayavani, Sep 3, 2023, 5:56 PM IST
ಜೈಪುರ: ರಾಜಸ್ಥಾನದ ಗಂಗಾಪುರ ನಗರದಲ್ಲಿ ಭಾನುವಾರ ಭಾರತೀಯ ಜನತಾ ಪಕ್ಷದ ‘ಪರಿವರ್ತನ್ ಸಂಕಲ್ಪ ಯಾತ್ರೆ’ಯನ್ನು ಪೊಲೀಸರು ತಡೆದರು.
ವಿಧಾನಸಭೆ ಚುನಾವಣೆ ಇರುವ ರಾಜ್ಯದಲ್ಲಿ ಬಿಜೆಪಿ ನಾಲ್ಕು ಪರಿವರ್ತನ ಸಂಕಲ್ಪ ಯಾತ್ರೆಗಳನ್ನು ಆಯೋಜಿಸಿದೆ. ಎರಡನೇ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಡುಂಗರ್ ಪುರದಿಂದ ಚಾಲನೆ ನೀಡಿದರು.
ಆದರೆ, ನಗರ ಪ್ರದೇಶಗಳ ಒಳಗೆ ಮೆರವಣಿಗೆಯನ್ನು ತೆಗೆದುಕೊಂಡು ಹೋಗಲು ಪಕ್ಷಕ್ಕೆ ಅನುಮತಿ ಇಲ್ಲ ಎಂದು ಪೊಲೀಸರು ಯಾತ್ರೆಯನ್ನು ತಡೆದರು. ಪೊಲೀಸರ ಕ್ರಮದ ನಂತರ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಯಾತ್ರೆಯ ಅನುಮತಿಗಾಗಿ ಲಿಖಿತ ಅರ್ಜಿಯನ್ನು ಆಡಳಿತಕ್ಕೆ ಸಲ್ಲಿಸಿದ್ದೇವೆ ಎಂದು ಪಕ್ಷ ಹೇಳಿಕೊಂಡಿದೆ.
ರಾಜಸ್ಥಾನದ ಮಾಜಿ ಬಿಜೆಪಿ ಮುಖ್ಯಸ್ಥ ಅರುಣ್ ಚತುರ್ವೇದಿ, ಸಂಸದ ಸುಖ್ ಬೀರ್ ಸಿಂಗ್ ಮತ್ತು ಶಾಸಕ ಜಿತೇಂದ್ರ ಗೋಥ್ವಾಲ್ ಸೇರಿದಂತೆ ರಾಜ್ಯದ ಪಕ್ಷದ ಹಿರಿಯ ನಾಯಕರು ಯಾತ್ರೆಯನ್ನು ತಡೆದ ಪೊಲೀಸರ ವಿರುದ್ಧ ಪ್ರತಿಭಟಿಸಲು ಧರಣಿ ಕುಳಿತರು.