ರಾಜ್ಯಸಭಾ ಸದಸ್ಯರ ರೈಲ್ವೇ ವೆಚ್ಚ 8 ಕೋಟಿ! ಸದಸ್ಯರ ಉದಾಸೀನದಿಂದ ಸಾರ್ವಜನಿಕರ ಹಣ ಪೋಲು
ರಾಜ್ಯಸಭಾ ಕಾರ್ಯಾಲಯಕ್ಕೆ ರೈಲ್ವೇ ಇಲಾಖೆ ದೂರು
Team Udayavani, Jun 13, 2020, 9:08 AM IST
ಹೊಸದಿಲ್ಲಿ: ಸಂಪೂರ್ಣ ದೇಶವೇ ಕೋವಿಡ್ ದಾಳಿಗೆ ನಲುಗಿ, ಆರ್ಥಿಕ ಸ್ಥಿತಿ ಕುಸಿದಿರುವ ಈ ಸಂದರ್ಭದಲ್ಲೂ ರಾಜ್ಯಸಭಾ ಸದಸ್ಯರ ಉಚಿತ ರೈಲು ಪ್ರಯಾಣಕ್ಕಾಗಿ ರಾಜ್ಯಸಭಾ ಕಾರ್ಯಾಲಯವು ರೈಲ್ವೇ ಇಲಾಖೆಗೆ 8 ಕೋಟಿ ರೂ. ಬಾಕಿ ಪಾವತಿ ಮಾಡಿದೆ. ಇದೇ ವೇಳೆ 2019ರ ರೈಲ್ವೇ ಬಿಲ್ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಅಧಿಕವಾಗಿದ್ದು, ಇದಕ್ಕೆ ಸದಸ್ಯರ ಉದಾಸೀನವೇ ಕಾರಣ ಎಂದು ರೈಲ್ವೇ ಇಲಾಖೆ ಗಂಭೀರ ಆರೋಪ ಮಾಡಿದೆ. ದೇಶವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ರಾಜ್ಯಸಭಾ ಸದಸ್ಯರು ತಮಗೆ ನೀಡಿರುವ ಸೌಲಭ್ಯಗಳ ದುರುಪಯೋಗ ಪಡೆಯುತ್ತಿದ್ದಾರೆ. ಇವರಿಂದಾಗಿ ಸಾರ್ವಜನಿಕರ ಅಪಾರ ಹಣ ವ್ಯರ್ಥವಾಗುತ್ತಿದೆ ಎಂದು ಇಲಾಖೆ ಆರೋಪಿಸಿದೆ.
ಸದಸ್ಯರು ತಮಗೆ ಹಾಗೂ ತಮ್ಮೊಂದಿಗೆ ಪ್ರಯಾಣಿಸುವ ಸಹಚರರಿಗಾಗಿ ಒಂದೇ ದಿನ ಹಲವು ರೈಲುಗಳಲ್ಲಿ ಒಂದಕ್ಕಿಂತ ಹೆಚ್ಚು ಟಿಕೆಟ್ಗಳನ್ನು ಬುಕ್ ಮಾಡುತ್ತಾರೆ. ಬಳಿಕ ಯಾವುದಾದರೂ ಒಂದು ರೈಲಿನಲ್ಲಿ ಕೇವಲ ಒಂದು ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಾರೆ. ಇದರಿಂದಾಗಿ ಸಾರ್ವಜನಿಕರ ಹಣ ವ್ಯರ್ಥವಾಗುತ್ತದೆ. ಜೊತೆಗೆ, ಇತರರಿಗೂ ಆಸನ ಇಲ್ಲದಂತಾಗುತ್ತದೆ ಎಂದು ರೈಲ್ವೇ ಇಲಾಖೆ ಗಂಭೀರವಾಗಿ ಆರೋಪಿಸಿದೆ. ಪರಿಣಾಮ ಎಚ್ಚೆತ್ತುಕೊಂಡಿರುವ ರಾಜ್ಯಸಭಾ ಕಾರ್ಯಾಲಯ, ಭವಿಷ್ಯದಲ್ಲಿ ಈ ರೀತಿಯ ಉದಾಸೀನ ಕಂಡುಬಂದಲ್ಲಿ ಸದಸ್ಯರ ವೇತನದಿಂದ ಹಣ ಮುರಿದುಕೊಳ್ಳುವುದಾಗಿ ತಿಳಿಸಿದೆ.