ಛತ್ತೀಸ್ ಗಢ ರಮಣ್ ಸಿಂಗ್ ಸರ್ಕಾರ ಬಹುತೇಕ ನಕ್ಸಲ್ ಮುಕ್ತ ಮಾಡಿದೆ; ಶಾ
Team Udayavani, Nov 10, 2018, 2:36 PM IST
ಛತ್ತೀಸ್ ಗಢ್: ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಸರ್ಕಾರ ಬಹುತೇಕ ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದು, ಇಂಧನ ಮತ್ತು ಸಿಮೆಂಟ್ ಉತ್ಪಾದನೆಗೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಶನಿವಾರ ಛತ್ತೀಸ್ ಗಢದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಕ್ಸಲಿಸಂ ಎಂಬುದು ಕ್ರಾಂತಿ ಮಾಧ್ಯಮ ಎಂದು ಕಾಂಗ್ರೆಸ್ ಬಣ್ಣಿಸುತ್ತಿದೆ. ಆದರೆ ಇದರಿಂದ ಛತ್ತೀಸ್ ಗಢಕ್ಕೆ ಯಾವುದೇ ಅಭಿವೃದ್ಧಿಯಾಗಲಿ, ಬೆಳವಣಿಗೆಯಾಗಲಿ ಆಗಿಲ್ಲ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು. ನವೆಂಬರ್ 12ರಂದು ಛತ್ತೀಸ್ ಗಢದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ನಂತರ ಶಾ ರಾಯ್ ಪುರ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು.
ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಛತ್ತೀಸ್ ಗಢದಲ್ಲಿ ನಕ್ಸಲೀಯರನ್ನು ಹತ್ತಿಕ್ಕುವ ಮೂಲಕ ಬಹುತೇಕ ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದೆ ಎಂದು ತಿಳಿಸಿದರು. ಈ ಹಿಂದೆ ರಾಜ್ಯವನ್ನು ಹಿಂದುಳಿದ(ಬಿಮಾರು) ರಾಜ್ಯ ಎಂದು ಆರೋಪಿಸಲಾಗಿತ್ತು. ಆದರೆ ಛತ್ತೀಸ್ ಗಢ್ ಇಂಧನ ಮತ್ತು ಸಿಮೆಂಟ್ ಉತ್ಪಾದನೆಯ ಕೇಂದ್ರವಾಗಿ ಬೆಳೆದಿದೆ ಎಂದರು.