ಕೆಂಪುಕೋಟೆ ಹಿಂಸಾಚಾರ ಕೇಸ್; ಮತ್ತೊಬ್ಬ ಮೋಸ್ಟ್ ವಾಂಟೆಡ್ ಇಕ್ಬಾಲ್ ಸಿಂಗ್ ಬಂಧನ
ಸಿಂಗ್ ಪೊಲೀಸರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Team Udayavani, Feb 10, 2021, 12:13 PM IST
ನವದೆಹಲಿ: ಕೆಂಪುಕೋಟೆಯಲ್ಲಿನ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ಇಕ್ಬಾಲ್ ಸಿಂಗ್ ನನ್ನು ಮಂಗಳವಾರ(ಫೆ.09, 2021) ರಾತ್ರಿ ಪಂಜಾಬ್ ನ ಹೋಶಿಯಾರ್ ಪುರದಲ್ಲಿ ವಿಶೇಷ ಪೊಲೀಸ್ ತಂಡ ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇನ್ನೂ ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿಯದ ಬಸ್ಗಳು
ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದು, ಸಿಂಗ್ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು.
ಪಂಜಾಬ್ ನ ಲುಧಿಯಾನಾ ನಿವಾಸಿಯಾಗಿರುವ ಇಕ್ಬಾಲ್ ಸಿಂಗ್ ಜನವರಿ 26ರ ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ದೀಪ್ ಸಿಧು ಭದ್ರತೆಯನ್ನು ಉಲ್ಲಂಘಿಸಿ ಸಿಖ್ ಧಾರ್ಮಿಕ ಬಾವುಟ ಹಾರಿಸಿದ ಮತ್ತು ಹಿಂಸಾಚಾರ ಪ್ರಕರಣದಲ್ಲಿನ ಪ್ರಮುಖ ಆರೋಪಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರೈತರ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರ, ಗಲಾಟೆಯಲ್ಲಿ ಸಿಂಗ್ ಪೊಲೀಸರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಂಜಾಬಿ ನಟ ದೀಪ್ ಸಿಧು ಬಂಧನದ ನಂತರ ಭಾನುವಾರ ಮತ್ತೊಬ್ಬ ಆರೋಪಿ ಸುಖ್ ದೇವ್ ಸಿಂಗ್ ನನ್ನು ಚಂಡೀಗಢದಲ್ಲಿ ಸುಮಾರು ನೂರು ಕಿಲೋ ಮೀಟರ್ ಹಿಂಬಾಲಿಸಿಕೊಂಡು ಹೋಗಿ ಸೆರೆ ಹಿಡಿದಿದ್ದರು.