ಗಡಿ ವಿವಾದ; ವಿಧಾನಸಭೆಯಲ್ಲಿ ಒಗ್ಗಟ್ಟು ವ್ಯಕ್ತಪಡಿಸುವ ನಿರ್ಣಯ ಮಂಡನೆ : ಸಿಎಂ ಶಿಂಧೆ
ನಮಗೆ ಇತರರಿಂದ ಯಾವುದೇ ಪಾಠದ ಅಗತ್ಯವಿಲ್ಲ... ನಾವು ಒಂದು ಇಂಚಿಗಾಗಿ ಕೂಡ ಹೋರಾಡುತ್ತೇವೆ...!
Team Udayavani, Dec 26, 2022, 9:25 PM IST
ನವದೆಹಲಿ: ಕರ್ನಾಟಕದೊಂದಿಗೆ ವಿವಾದಿತ ಗಡಿ ಪ್ರದೇಶದಲ್ಲಿ ವಾಸಿಸುವವರಿಗೆ ಒಗ್ಗಟ್ಟು ವ್ಯಕ್ತಪಡಿಸುವ ನಿರ್ಣಯವನ್ನು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗಾರರಿಗೆ ಮಾತನಾಡಿದ ಶಿಂಧೆ, ತಮ್ಮ ದೆಹಲಿ ಭೇಟಿಯನ್ನು ಟೀಕಿಸಿದ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ನಾಯಕ, ಮಾಜಿ ಸಿಎಂ ಉದ್ಧವ್ ಠಾಕ್ರೆ ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿರುವುದಕ್ಕೆ ಪ್ರತಿಕ್ರಿಯಿಸಿ “ನಮಗೆ ಇತರರಿಂದ ಯಾವುದೇ ಪಾಠ ಅಗತ್ಯವಿಲ್ಲ. ಗಡಿ ಪ್ರದೇಶದಲ್ಲಿ ವಾಸಿಸುವವರೊಂದಿಗೆ ನಾವು ದೃಢವಾಗಿ ನಿಂತಿದ್ದೇವೆ. ನಾಳೆ (ಮಂಗಳವಾರ) ವಿಧಾನಸಭೆಯಲ್ಲಿ ಜಾರಿಗೆ ತರಲು ನಾವು ನಿರ್ಣಯವನ್ನು ತರುತ್ತಿದ್ದೇವೆ” ಎಂದು ತಿಳಿಸಿದರು.
ಸೋಮವಾರ ನಡೆಯುತ್ತಿರುವ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ವಿಷಯ ಪ್ರತಿಧ್ವನಿಸುತ್ತಿದ್ದಂತೆ ವೀರ್ ಬಾಲ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದ ಶಿಂಧೆ ಅವರ ಈ ಹೇಳಿಕೆಯು ಸೋಮವಾರದಂದು ಪ್ರತಿಧ್ವನಿಸಿತು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗಡಿ ವಿವಾದದ ಕುರಿತು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಣಯವನ್ನು ಮಂಡಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.
“ನಾವು ಒಂದು ಇಂಚಿಗಾಗಿ ಕೂಡ ಹೋರಾಡುತ್ತೇವೆ. ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆಯ ನ್ಯಾಯಕ್ಕಾಗಿ ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಫಡ್ನವೀಸ್ ಹೇಳಿದರು.