ಅಂತರ್ಜಾಲ ಬಳಕೆ ಜನರ ಮೂಲಭೂತ ಹಕ್ಕಲ್ಲ: ಸಚಿವ ರವಿಶಂಕರ್ ಪ್ರಸಾದ್
Team Udayavani, Feb 7, 2020, 9:30 AM IST
ಹೊಸದಿಲ್ಲಿ: ಅಂತರ್ಜಾಲ ಬಳಕೆ ಸಾರ್ವಜನಿಕರ ಮೂಲಭೂತ ಹಕ್ಕಲ್ಲ. ಈ ಕುರಿತಾಗಿ ಇರುವ ತಪ್ಪು ಕಲ್ಪನೆಯನ್ನು ನಿವಾರಿಸುವ ಅಗತ್ಯ ಇದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ರಾಜ್ಯಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಈ ವಿಚಾರ ತಿಳಿಸಿದ ದೂರಸಂಪರ್ಕ ಸಚಿವರೂ ಆಗಿರುವ ಪ್ರಸಾದ್, ‘ಅಂತರ್ಜಾಲ ಬಳಕೆಯ ವಿಚಾರದ ಜತೆಗೆ ದೇಶದ ಭದ್ರತೆಯ ವಿಚಾರವೂ ಪ್ರಮುಖವಾದದ್ದು. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ, ಅಂತರ್ಜಾಲದಲ್ಲಿ ಹಾಕಲಾಗುವ ಅನಿಸಿಕೆಗಳಿಗೂ ಸಂಬಂಧವಿಲ್ಲ.
ಅಂತರ್ಜಾಲ ಬಳಕೆಯು ಸಾರ್ವಜನಿಕ ಮೂಲಭೂತ ಹಕ್ಕಾಗಬೇಕು ಎಂದು ಯಾವುದೇ ವಕೀಲನೂ ಈವರೆಗೆ ವಾದ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ’ ಎಂದಿದ್ದಾರೆ. ಜತೆಗೆ, ಸುಪ್ರೀಂ ಕೋರ್ಟ್ ಇಂಟರ್ನೆಟ್ ಬಳಕೆಯನ್ನು ಮೂಲ ಭೂತ ಹಕ್ಕು ಎಂದು ಕರೆದಿರುವುದು ನಿಜ.
ಆದರೆ ಜಮ್ಮು – ಕಾಶ್ಮೀರದಂಥ ಸೂಕ್ಷ ಪ್ರದೇಶದಲ್ಲಿ ಇಂಟರ್ನೆಟ್ ಅನ್ನು ಪಾಕಿಸ್ಥಾನ ಮತ್ತಿತರ ಭಾರತ ವಿರೋಧಿ ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುವ ಅವಕಾಶಗಳಿರುವುದರಿಂದ ನಿಯಂತ್ರಣ ಅನಿವಾರ್ಯ ಎಂದೂ ಹೇಳಿದ್ದಾರೆ.