ತೇಜಸ್ವಿಗೆ ಹೊಡೆತ ಬೀಳಬೇಕು: ಆರ್ಜೆಡಿ ಸಂಸ್ಥಾಪನಾ ದಿನ ನಾಯಕರ ಆಕ್ರೋಶ ಬಹಿರಂಗ
Team Udayavani, Jul 6, 2019, 11:52 AM IST
ಪಟ್ನಾ : ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರರಲ್ಲಿ ಸಾಗಿರುವ ಅಧಿಕಾರ ಪಾರಮ್ಯದ ಮೇಲಾಟ ಈಗ ಪರಾಕಾಷ್ಠೆಯನ್ನು ತಲುಪಿದೆ.
ಇದಕ್ಕೆ ಸಾಕ್ಷಿಯಾಗಿ ನಿನ್ನೆ ಶುಕ್ರವಾರ ನಡೆದಿದ್ದ ಪಕ್ಷದ 26ನೇ ಸಂಸ್ಥಾಪನಾ ದಿನದ ಕಾರ್ಯಕ್ರಮಕ್ಕೆ ಲಾಲು ಕಿರಿಯ ಪುತ್ರ ತೇಜಸ್ವಿಯಾದವ್ ಗೈರಾಗಿದ್ದು, ಈ ವಿದ್ಯಮಾನ ಹಲವರ ಹುಬ್ಬೇರಿಸಿದೆ.
ಲೋಕಸಭಾ ಚುನಾವಣಾ ಫಲಿತಾಂಶಗಳ ಹೊರಬಿದ್ದ ಬಳಿಕದಲ್ಲಿ ಆರ್ಜೆಡಿ ಪಕ್ಷದ ಅತ್ಯಂತ ದಯನೀಯ ನಿರ್ವಹಣೆ ಜಗಜ್ಜಾಹೀರಾದುದನ್ನು ಅನಸರಿಸಿ ಪಕ್ಷದ ನಾಯಕ ತೇಜಸ್ವಿ ಯಾದವ್ ಸಾರ್ವಜನಿಕರ ಕಣ್ಣಿನಿಂದ ಬಹುತೇಕ ನಾಪತ್ತೆಯಾಗಿದ್ದರು.
ತೇಜಸ್ವಿ ಯಾದವ್ ಹಿಂದೆ ನಿತೀಶ್ ಕುಮಾರ್ ನೇತೃತ್ವದ ಮಹಾ ಘಟಬಂಧನ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು.
ಪಕ್ಷದ ನಿನ್ನೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರ್ಜೆಡಿ ನಾಯಕ ಶಿವಾನಂದ ತಿವಾರಿ ಅವರು, “ತೇಜಸ್ವಿಗೆ ಹೊಡೆತ ಬೀಳಬೇಕೆಂದು ನಾವು ಬಯಸುತ್ತೇವೆ; ಆತ ಪೊಲೀಸರ ಲಾಠಿಯನ್ನು ಎದುರಿಸಬೇಕು; ನಿತೀಶ್ ಸರಕಾರ ಆತನನ್ನು ಜೈಲಿಗೆ ಅಟ್ಟಬೇಕು; ಹಾಲಿ ಸ್ಥಿತಿಯಲ್ಲಿ ಲಾಲು ಜೀ ಗೆ ಟನ್ಶನ್ ಉಂಟಾಗಿದೆ’ ಎಂದು ಪಕ್ಷ ಕಾರ್ಯಕರ್ತರ ಕರತಾಡನದ ನಡುವೆ ಹೇಳಿದ್ದರು.
ತಿವಾರಿ ತನ್ನ ಮಾತನ್ನು ಮುಂದುವರಿಸಿ, “ತೇಜಸ್ವಿ ತನ್ನ ಅಪ್ಪನನ್ನು ಅನುಸರಿಸಬೇಕು; ಆತ ಮುಂದೆ ಬಂದ ಹೋರಾಟಕ್ಕೆ ಇಳಿಯಬೇಕು; ಸಿಂಹ ತನ್ನ ಗುಹೆಯಲ್ಲಿ ಆಡಗಿ ಕೂರುವುದು ಸರಿಯಲ್ಲ; ಅದು ಹೊರ ಬರಬೇಕು; ಇಲ್ಲದಿದ್ದರೆ ಏನೂ ಸಾಧ್ಯವಾಗದು’ ಎಂದು ಹೇಳಿದ್ದರು.
“ಆರ್ಜೆಡಿ ಸಿದ್ಧಾಂತ ಈಗ ನಿಂತ ನೀರಿನಂತಾಗಿದೆ. ನೀರು ಹರಿಯುತ್ತಲೇ ಇದ್ದರೆ ಚೆನ್ನ, ಮಡುಗಟ್ಟಿ ನಿಂತರೆ ಕೊಳಕು ವಾಸನೆ ಹೊರಹೊಮ್ಮುತ್ತದೆ. ಕಳೆದ ಚುನಾವಣೆಯನ್ನು ರಾಷ್ಟ್ರೀಯತೆಯ ಬಲದಲ್ಲೇ ಜಯಿಸಿರುವ ಮೋದಿ ಗೆ ನಾವು ಸೂಕ್ತ ಉತ್ತರ ಕೊಟ್ಟೇ ಇಲ್ಲ’ ಎಂದು ತಿವಾರಿ ಹೇಳಿದ್ದರು.
‘ಮುಜಫರಪುರದಲ್ಲಿ ನೂರಕ್ಕೂ ಅಧಿಕ ಮಕ್ಕಳು ತೀವ್ರತಮ ಮೆದುಳು ಜ್ವರಕ್ಕೆ ಬಲಿಯಾದ ಸಂದರ್ಭದಲ್ಲಿ ನಮ್ಮ ಪಕ್ಷದವರು ಏನು ಮಾಡಿದರು ? ಏನೂ ಮಾಡಲಿಲ್ಲ; ಬದಲು ಉಂಡು ಮಲಗಿದರು ! ಇದರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬಂತು’ ಎಂದು ತಿವಾರಿ ಹೇಳಿದ್ದರು.
ಹಾಗಿದ್ದರೂ ಪುತ್ರ ತೇಜಸ್ವಿಯನ್ನು ಸಮರ್ಥಿಸಿಕೊಂಡ ಲಾಲು ಪತ್ನಿ ರಾಬ್ರಿ ದೇವಿ ಅವರು, “ಒಬ್ಬನಿಂದ ಏನು ತಾನೇ ಮಾಡಲು ಸಾಧ್ಯ ? ಪಕ್ಷದ ನಾಯಕರೆಲ್ಲ ಕೂಡಿಕೊಂಡು ಹೋರಾಡಬೆಕು’ ಎಂದು ಹೇಳಿದ್ದರು.