ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ
Team Udayavani, May 8, 2021, 1:06 PM IST
ಪಶ್ಚಿಮ ಬಂಗಾಳ : ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಿರುವ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಬಿಜೆಪಿ ನಾಯಕರು ಹಾಗೂ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಇಂದು ಮಾಧ್ಯಮಗಳ ಎದುರು ಮಾತಾನಾಡಿರುವ ದೀದಿ, ಬಂಗಾಳ ಎನ್ನುವುದು ಗಟ್ಟಿಮುಟ್ಟಾದ ಬೆನ್ನು ಮೂಳೆ, ಅದನ್ನು ಅಷ್ಟು ಸುಲಭವಾಗಿ ಬೆಂಡ್ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಇತ್ತೀಚಿಗೆ ನಡೆದ ವಿಧಾನ ಸಭೆ ಚುನಾವಣೆಯ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ಆ ಸಂದರ್ಭದಲ್ಲಿ ದೊಡ್ಡ ಪಿತೂರಿಯೊಂದು ನಡೆದಿತ್ತು. ಕೇಂದ್ರ ಸಚಿವರ ದಂಡೇ ಇಲ್ಲಿ ನೆರೆದಿತ್ತು. ಅವರ ಓಡಾಟಕ್ಕೆ ವಿಮಾನ ಹಾಗೂ ಉಳಿದುಕೊಳ್ಳಲು ಹೋಟೆಲ್ಗಳಿಗಾಗಿ ಎಷ್ಟು ಕೋಟಿ ಹಣ ಖರ್ಚು ಮಾಡಿದ್ದಾರೆ ಎನ್ನುವುದು ನಂಗೆ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ನೀರಿನಂತೆ ಹಣದ ಹೊಳೆ ಹರಿದಿದೆ ಎಂದಿದ್ದಾರೆ.
ಇದೇ ವೇಳೆ ಚುನಾವಣಾ ಆಯೋಗದ ವಿರುದ್ಧ ಗುಡುಗಿರುವ ಮಮತಾ, ತಕ್ಷಣವೆ ಚುನಾವಣಾ ಆಯೋಗದಲ್ಲಿ ಸುಧಾರಣೆಯಾಗುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೋವಿಡ್ ಲಸಿಕೆ ವಿಚಾರವಾಗಿ ಮಾತನಾಡಿರುವ ದೀದಿ, ಕೇಂದ್ರ ಸರ್ಕಾರವು ಇಡೀ ದೇಶದ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಯೋಜನೆ ರೂಪಿಸಬೇಕು. ಕೇಂದ್ರ ಸರ್ಕಾರಕ್ಕೆ 30,000 ಕೋಟಿ ರೂಪಾಯಿ ಖರ್ಚು ಮಾಡುವುದು ದೊಡ್ಡ ವಿಷಯವೇನಲ್ಲ ಎಂದಿದ್ದಾರೆ.