ಅಹ್ಮದ್ ಆಯ್ಕೆ: ಹೊಸ ವಿಚಾರಣೆಗೆ ಸೂಚನೆ
Team Udayavani, Sep 27, 2018, 6:00 AM IST
ನವದೆಹಲಿ: ರಾಜ್ಯಸಭೆಗೆ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಆಯ್ಕೆ ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೊಸತಾಗಿ ವಿಚಾರಣೆ ನಡೆಸುವಂತೆ ಗುಜರಾತ್ ಹೈಕೋರ್ಟ್ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಬುಧವಾರ ಈ ಆದೇಶ ನೀಡಿದೆ. ಬಿಜೆಪಿ ನಾಯಕ ಬಲವಂತ್ ಸಿಂಗ್ ರಜಪೂತ್ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.
ಕಳೆದ ವರ್ಷ ನಡೆದಿದ್ದ ಈ ಹೈವೋಲ್ಟೆಜ್ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ಗೆ 44 ಮತಗಳು ಪ್ರಾಪ್ತವಾಗಿದ್ದವು. ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದ ಇಬ್ಬರು ಶಾಸಕರಾದ ಭೋಲಾ ಭಾಯ್ ಘೋಲಿ ಮತ್ತು ರಾಘವ್ ಭಾಯ್ ಪಟೇಲ್ರ ಮತಗಳನ್ನು ಅಸಿಂಧು ಎಂದು ಚುನಾವಣಾ ಆಯೋಗ ಪ್ರಕಟಿಸಿದ ಬಳಿಕ ಜಯಗೊಳಿಸಲು ಬೇಕಾಗಿದ್ದ ಮತಗಳ ಸಂಖ್ಯೆ ಒಟ್ಟು 45ರಿಂದ 44ಕ್ಕೆ ಇಳಿದಿತ್ತು.
ಪಟೇಲ್ ಆಯ್ಕೆ ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ರಜಪೂತ್ ಗುಜರಾತ್ ಹೈಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ, ಇಬ್ಬರ ಮತ ಅಸಿಂಧುಗೊಳಿಸಿದ್ದು ಸರಿಯಲ್ಲ. ಅದನ್ನು ಪರಿಗಣಿಸಿದ್ದರೆ ವಿಜಯಿಯಾಗುತ್ತಿದ್ದೆ ಎಂದು ವಾದಿಸಿದ್ದರು. ಕಾಂಗ್ರೆಸ್ ಶಾಸಕರನ್ನು ಪಟೇಲ್ ಬೆಂಗಳೂರಿಗೂ ಕರೆದುಕೊಂಡು ಹೋಗಿದ್ದರು ಎಂದು ವಾದಿಸಿದ್ದರು. ಅಹ್ಮದ್ ಪಟೇಲ್ ರಜಪೂತ್ ಅರ್ಜಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದ್ದರಿಂದ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.