ಕೇಂದ್ರ ಸರ್ಕಾರ- ಪಶ್ಷಿಮ ಬಂಗಾಲ ನಡುವೆ ಭದ್ರತಾ ಸಮರ!
Team Udayavani, May 23, 2021, 7:45 AM IST
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಲ ಸರಕಾರದ ನಡುವೆ ಮತ್ತೂಂದು ಸುತ್ತಿನ ಸಮರ ಶುರುವಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ಟಿಕೆಟ್ನಡಿ 77 ಮಂದಿ ಬಂಗಾಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರೆಲ್ಲರಿಗೂ ಮಮತಾ ಸರಕಾರದ ವಿರೋಧದ ನಡುವೆಯೇ ಕೇಂದ್ರ ಗೃಹಸಚಿವಾಲಯ ಭದ್ರತೆ ಒದಗಿಸಿದೆ.
ಅದರ ಬೆನ್ನಲ್ಲೇ ಬಂಗಾಲದಲ್ಲಿ ವಿರೋಧಪಕ್ಷದ ನಾಯಕರಾಗಿರುವ ಸುವೇಂದು ಅಧಿಕಾರಿ ಅವರ ತಂದೆ ಸಿಸಿರ್ ಕುಮಾರ್ಗೆ ವೈ+ ಭದ್ರತೆಯನ್ನು ಕೇಂದ್ರ ಒದಗಿಸಿದೆ. ಸಿಸಿರ್ ಕುಮಾರ್ ಅಧಿಕಾರಿ ಮತ್ತು ಸಹೋದರ ದಿಬ್ಯೇಂದು ಅಧಿಕಾರಿ ಇಬ್ಬರೂ ಟಿಎಂಸಿಯಿಂದಲೇ ಗೆದ್ದು ಲೋಕಸಭಾ ಸದಸ್ಯರಾಗಿದ್ದಾರೆ. ಆದರೆ, ಸಿಸಿರ್ ಅವರು ಮಾರ್ಚ್ನಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು.
ದೀದಿಯನ್ನು ಬಿಟ್ಟಿರಲಾರೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಟಿಎಂಸಿ ಮಾಜಿ ಶಾಸಕಿ ಸೋನಾಲಿ ಗುಹಾ ಅವರು ಮತ್ತೆ ಘರ್ ವಾಪ್ಸಿಗೆ ಮುಂದಾಗಿದ್ದಾರೆ. ನಾನು ಪಕ್ಷವನ್ನು ಬಿಟ್ಟು ತಪ್ಪು ಮಾಡಿದೆ. ಮೀನು ಹೇಗೆ ನೀರನ್ನು ಬಿಟ್ಟು ಬದುಕುವುದಿಲ್ಲವೋ, ಅದೇ ರೀತಿ ನಾನು ದೀದಿಯನ್ನು ಬಿಟ್ಟು ಬದುಕುವುದಿಲ್ಲ. ಹೀಗಾಗಿ, ದಯವಿಟ್ಟು ನನ್ನನ್ನು ಕ್ಷಮಿಸಿ, ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಸೋನಾಲಿ ಅವರು ಸಿಎಂಮಮತಾಗೆ ಮನವಿ ಮಾಡಿದ್ದಾರೆ.