Sandeshkhali ಪ್ರಕರಣಕ್ಕೆ ದಿಢೀರ್ ತಿರುವು : ಇಬ್ಬರು ಸಂತ್ರಸ್ತೆಯರಿಂದ ದೂರು ವಾಪಸ್!
ಖಾಲಿ ಪತ್ರಕ್ಕೆ ಸಹಿ ಹಾಕಿಸಿ ರೇಪ್ ಕೇಸ್: ಆರೋಪ
Team Udayavani, May 10, 2024, 6:55 AM IST
ಕೋಲ್ಕತಾ: “ನಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಸುಳ್ಳು ಕೇಸು ದಾಖಲಿಸಲಾಗಿದೆ. ಅಸಲಿಗೆ ದೂರಿನಲ್ಲಿ ಏನಿದೆ ಎಂಬುದೇ ನಮಗೆ ತಿಳಿದಿರಲಿಲ್ಲ, ನಮ್ಮಿಂದ ಬರೀ ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡಿದ್ದರು’. ಹೀಗೆಂದು ಪಶ್ಚಿಮ ಬಂಗಾಲದ ಸಂದೇಶ್ಖಾಲಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯರಿ ಬ್ಬರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಂದೇಶ್ ಖಾಲಿ ಪ್ರಕರಣವು ದಿಢೀರ್ ತಿರುವು ಪಡೆದುಕೊಂಡಿದೆ.
ಅತ್ಯಾಚಾರ ಸಂತ್ರಸ್ತೆಯರು ಎನ್ನಲಾ ಗಿದ್ದ ಅತ್ತೆ-ಸೊಸೆ ಇಬ್ಬರು ಮಾಧ್ಯಮ ಗಳೊಂದಿಗೆ ಈ ಕುರಿತು ಮಾತನಾಡಿದ್ದು, “ರಾಷ್ಟ್ರೀಯ ಮಹಿಳಾ ಆಯೋಗದಿಂದ ಪಿಯಾಲಿ ದಾಸ್, ಮಂಪಿ ದಾಸ್ ಎಂಬ ಇಬ್ಬರು ಮಹಿಳೆಯರು ಬಂದು ನಿಮ್ಮ ಸಮಸ್ಯೆ ಏನು ಎಂದು ಕೇಳಿದಾಗ 100 ದಿನಗಳ ಉದ್ಯೋಗ ಖಾತರಿ ಯೋಜನೆ ಅನ್ವಯ ನಾವು ಕೆಲಸ ಮಾಡಿದ್ದೇವೆ, ಅದರ ವೇತನ ಇನ್ನೂ ಬಂದಿಲ್ಲ ಎಂದು ನಾವು ತಿಳಿಸಿದೆವು. ಅದಕ್ಕೆ ನಮ್ಮಿಂದ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡರು. ಅದರ ಹೊರತಾಗಿ ದೂರಿನಲ್ಲಿ ಏನಿದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಬಳಿಕವೇ ನಮಗೆ ಅತ್ಯಾಚಾರ ಸಂತ್ರಸ್ತೆ ಯರ ಪಟ್ಟಿಯಲ್ಲಿ ನಮ್ಮ ಹೆಸರೂ ಇದೆ ಎಂಬುದು ತಿಳಿಯಿತು’ ಎಂದಿದ್ದಾರೆ.
ದೂರು ದಾಖಲು: ನಮ್ಮ ಮೇಲೆ ಅತ್ಯಾಚಾರ ನಡೆದಿಲ್ಲ. ಯಾವುದೇ ಸುಳ್ಳು ದೂರಿನಲ್ಲಿ ಭಾಗಿಯಾಗಲು ನಮಗೆ ಇಷ್ಟವಿಲ್ಲ. ಸುಳ್ಳು ದೂರಿನಿಂದಾಗಿ ನಮ್ಮ ನೆರೆ ಹೊರೆಯವರೂ ನಮ್ಮೊಂದಿಗೆ ಮಾತನಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೂರು ಹಿಂಪಡೆಯುತ್ತಿದ್ದೇವೆ ಎಂದೂ ಹೇಳಿದ್ದಾರೆ. ದೂರು ಹಿಂಪಡೆದ ಬಳಿಕ ಮಹಿಳೆಯರು ತಮಗೆ ಬೆದರಿಕೆ ಇದೆ ಎಂದು ಹೊಸ ಕೇಸು ದಾಖಲಿಸಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಮುಂದೆಯೂ ಈ ಮಹಿಳೆಯರು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಬೆನ್ನಲ್ಲೇ ಮತ್ತೆ ಬಿಜೆಪಿ-ಟಿಎಂಸಿ ನಡುವೆ ವಾಕ್ಸಮರ ಶುರುವಾಗಿದೆ.
ಚು.ಆಯೋಗಕ್ಕೆ ಟಿಎಂಸಿ ದೂರು
ಸಂದೇಶ್ ಖಾಲಿ ಪ್ರಕರಣದಲ್ಲಿ ಬಿಜೆಪಿ ಪಾತ್ರ ಮತ್ತು ಇಡೀ ಪ್ರಕರಣ ಪೂರ್ವ ನಿಯೋಜಿತ ಸಂಚು ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಮಾತಾಡಿದ್ದಾರೆ ಎನ್ನಲಾಗಿದ್ದ ವೀಡಿಯೋ ಬಿಡುಗಡೆ ಚರ್ಚೆ ಹುಟ್ಟುಹಾಕಿದ್ದ ಬೆನ್ನಲ್ಲೇ, ಸಂತ್ರಸ್ತ ಮಹಿಳೆಯರ ಈ ಯೂಟರ್ನ್ ಪ್ರಕರಣದ ದಿಕ್ಕು ಬದಲಿಸಿದೆ. ಏತನ್ಮಧ್ಯೆ ವೀಡಿಯೋ ಕುರಿತಂತೆ ತನಿಖೆಗೆ ಆಗ್ರಹಿಸಿ ಬಿಜೆಪಿ ವಿರುದ್ಧ ಚುನಾವಣೆ ಆಯೋಗಕ್ಕೆ ಟಿಎಂಸಿ ದೂರು ನೀಡಿದೆ.
ಬಿಜೆಪಿ ತನ್ನ ರಾಜಕೀಯ ಹಿತಾಸಕ್ತಿಗಾಗಿ ತಾಯಂದಿರು ಮತ್ತು ನಮ್ಮ ಸಹೋದರಿಯರ ಘನತೆಯನ್ನು ತುಳಿಯುತ್ತಿದೆ. ಧೈರ್ಯವಂತ ಮಹಿಳೆಯರನ್ನೂ ಬೆದರಿಕೆ ಹಾಕಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸುತ್ತಿದೆ.
ಸುಶ್ಮಿತಾ ದೇವ್, ಟಿಎಂಸಿ ಸಂಸದೆ
ಈ ಹಿಂದೆ ಸಂದೇಶ್ಖಾಲಿ ಮಹಿಳೆಯರು ಸುಳ್ಳು ಹೇಳುತ್ತಿದ್ದಾರೆ ಎನ್ನುತ್ತಿದ್ದ ಟಿಎಂಸಿ, ಇದೀಗ ಅವರಿಂದ ಸುಳ್ಳು ಹೇಳಿಸಲಾಗಿದೆ ಎನ್ನುತ್ತಿದೆ. ಈ ಮೂಲಕ ತನ್ನ ಪಕ್ಷದಿಂದಾಗಿರುವ ಅಚಾತುರ್ಯ ಮುಚ್ಚಿಹಾಕಲು ಸರ್ವ ಪ್ರಯತ್ನ ಮಾಡುತ್ತಿದೆ.
ಪ್ರಿಯಾಂಕಾ, ಬಿಜೆಪಿ ವಕ್ತಾರೆ