ಪಾಲಿಕೆ ಚುನಾವಣೆಯಿಂದಾಗಿ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳ – ಸುದೀನ್ ಧವಳೀಕರ್
Team Udayavani, May 8, 2021, 7:56 PM IST
ಪಣಜಿ: ಗೋವಾದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ಪಾಲಿಕೆ ಚುನಾವಣೆಯಿಂದಾಗಿ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಹರಡುವಂತಾಗಿದೆ. ಕೋವಿಡ್ 3ನೇ ಅಲೆಯ ಭೀಕರತೆಯಿಂದ ತಪ್ಪಿಸಿಕೊಳ್ಳಲು ಮುಂಬರುವ 2 ವರ್ಷಗಳ ಕಾಲ ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆಸಬಾರದು ಎಂದು ಮಹಾರಾಷ್ಟ್ರವಾಧಿ ಗೋಮಂತಕ ಪಕ್ಷದ ಪ್ರಮುಖ ಸುದೀನ್ ಧವಳೀಕರ್ ಅಭಿಪ್ರಾಯಪಟ್ಟಿದ್ದಾರೆ.
ಪೊಂಡಾದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಕೋವಿಡ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಲು ರಾಜ್ಯ ಸರ್ಕಾರವೇ ಹೊಣೆಯಾಗಿದೆ. ಕರೋನಾ ಸೋಂಕು ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ರಾಜ್ಯದ ಜನತೆ ತಮ್ಮ ಜೀವವನ್ನು ಉಳಿಸಿಕೊಳ್ಳಲು ತಾವೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಆಕ್ಸಿಜನ್ ಪೂರೈಕೆಯ ಅಭಾವದಿಂದಾಗಿ ಕರೋನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇಷ್ಟೇ ಅಲ್ಲದೆಯೇ ಒಂದೇ ಸಿಲಿಂಡರ್ನಿಂದ ಹಲವರಿಗೆ ಆಕ್ಸಿಜನ್ ಪೂರೈಕೆ ಮಾಡುವುದರಿಂದ ಆಕ್ಸಿಜನ್ ಕೊರತೆಯಿಂದಾಗಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಧವಳೀಕರ್ ಅಭಿಪ್ರಾಯಪಟ್ಟರು.
ಹೊರ ರಾಜ್ಯಗಳಿಂದ ಗೋವಾಕ್ಕೆ ಆಗತ್ಯ ವಸ್ತು ಪೂರೈಕೆ ಮಾಡುವ ವಾಹನ ಚಾಕರಿಗೂ ಕೋವಿಡ್ ತಪಾಸಣೆ ನಡೆಸಬೇಕು. ರಾಜ್ಯದಲ್ಲಿ ಸೂಕ್ತ ಸಮಯದಲ್ಲಿ ಲಾಕ್ಡೌನ್ ಮಾಡಲಿಲ್ಲ ಇದರಿಂದಾಗಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವಂತಾಗಿದೆ ಎಂದು ಸುದೀನ್ ಧವಳಿಕರ್ ಅಭಿಪ್ರಾಯಪಟ್ಟರು.