ತೀರ್ಪಿಗೆ ತಡೆ ಕೊಡುವುದೇ ಇಲ್ಲ
Team Udayavani, May 4, 2018, 9:00 AM IST
ಹೊಸದಿಲ್ಲಿ: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಕ್ಷಣೆಗೆ ಶೇ.100ರಷ್ಟು ಬದ್ಧವಾಗಿದ್ದೇವೆ. ಆದರೆ, ಎಸ್ಸಿ, ಎಸ್ಟಿ ಕಾಯ್ದೆ ಕುರಿತು ನೀಡಿರುವ ತೀರ್ಪಿನಿಂದ ಹಿಂದೆ ಸರಿಯುವುದಿಲ್ಲ’ ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.
ಎಸ್ಸಿ, ಎಸ್ಟಿ ಕಾಯ್ದೆ ಸಂಬಂಧ ಮಾ.20ರಂದು ನೀಡಿದ್ದ ಆದೇಶವನ್ನು ಹಿಂಪಡೆಯಬೇಕೆಂದು ಸರಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ನ್ಯಾಯಪೀಠಕ್ಕೆ ಮನವಿ ಮಾಡಿದರು. ಅದೊಂದು ತಪ್ಪು ಆದೇಶವಾಗಿದ್ದು, ಜನರ ಹಿತಾಸಕ್ತಿಗಾಗಿ ಸದನವು ಜಾರಿಗೊಳಿಸಿದ ಕಾನೂನಿಗೆ ವಿರುದ್ಧವಾಗಿ ನಿಯಮಗಳನ್ನು, ಆದೇಶಗಳನ್ನು ನೀಡಲು ಸುಪ್ರೀಂ ಕೋರ್ಟ್ಗೆ ಅಧಿಕಾರವಿಲ್ಲ ಎಂದೂ ಅವರು ವಾದಿಸಿದರು. ಅಲ್ಲದೆ, ಮಾ. 20ರ ಆದೇಶದಿಂದಾಗಿ ದೇಶದಲ್ಲಿ ಗಲಭೆಗಳಾಗಿದ್ದು ಜೀವ ಹಾಗೂ ಆಸ್ತಿಪಾಸ್ತಿ ಹಾನಿಯಾಗಿರುವ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ಹೆಚ್ಚು ಸದಸ್ಯರಿರುವ ಮತ್ತೂಂದು ನ್ಯಾಯಪೀಠಕ್ಕೆ ವರ್ಗಾಯಿಸಬೇಕೆಂದು ಕೋರಿದರು.
ಆದರೆ, ವೇಣುಗೋಪಾಲ್ ವಾದ ಆಲಿಸಿದ ನಂತರವೂ ಸುಪ್ರೀಂಕೋರ್ಟ್ ತನ್ನ ಹಿಂದಿನ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಅಲ್ಲದೆ, ಎಸ್ಸಿ, ಎಸ್ಟಿಗಳ ರಕ್ಷಣೆಗೆ ನ್ಯಾಯಾಲಯ ಬದ್ಧವಾಗಿದೆ. ಅವರ ವಿರುದ್ಧ ಜಾತಿ ನಿಂದನೆ ಮಾಡಿದವರಿಗೆ ಸೂಕ್ತ ಶಿಕ್ಷೆ ನೀಡುತ್ತದೆ. ಆದರೆ, ಅಮಾಯಕರನ್ನು ಶಿಕ್ಷೆಯಿಂದ ತಪ್ಪಿಸುವುದೂ ನಮ್ಮ ಜವಾಬ್ದಾರಿಯಾಗಿದೆ ಎಂದು ನ್ಯಾಯಪೀಠ ತಿಳಿಸಿತು.