ಸುಗ್ರಿವಾಜ್ಞೆಗೆ ಅಂಕಿತ : ತಮಿಳು ನಾಡಿನಾದ್ಯಂತ ಭಾನುವಾರ ಜಲ್ಲಿಕಟ್ಟು
Team Udayavani, Jan 21, 2017, 7:14 PM IST
ಚೆನ್ನೈ : ತಮಿಳು ನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ರಾಜ್ಯ ಸರಕಾರದ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದಾರೆ. ಪರಿಣಾಮವಾಗಿ ನಾಳೆ ಭಾನುವಾರವೇ ತಮಿಳು ನಾಡಿನಲ್ಲಿ ಜಲ್ಲಿಕಟ್ಟು ನಡೆಯಲಿದೆ ಎಂದು ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಹೇಳಿದ್ದಾರೆ.
ನಾಳೆ ಭಾನುವಾರ ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಪನ್ನೀರ ಸೆಲ್ವಂ ಅವರು ಜಲ್ಲಿಕಟ್ಟು ಕ್ರೀಡೆಗೆ ಹೆಸರವಾಸಿಯಾಗಿರುವ ಮಧುರೆ ಜಿಲ್ಲೆಯ ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕ್ರೀಡಾ ಸಮಾರಂಭವನ್ನು ಉದ್ಘಾಟಿಸುವರು.
ಜಿಲ್ಲಾಧಿಕಾರಿ ಕೆ ವೀರ ರಾಘವ ರಾವ್ ನೀಡಿರುವ ಹೇಳಿಕೆ ಪ್ರಕಾರ ನಾಳೆ ನಡೆಯಲಿರುವ ಜಲ್ಲಿಕಟ್ಟು ಕ್ರೀಡಾ ಮಹೋತ್ಸವದ ಉದ್ಘಾಟನೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಸರಕಾರದಿಂದ ಹಸಿರು ನಿಶಾನೆಯನ್ನು ಮಾತ್ರವೇ ಎದುರು ನೋಡಲಾಗುತ್ತಿದೆ. ಇತರ ಮಂತ್ರಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಉದ್ಘಾಟಿಸುವರು.
ಮುಖ್ಯಮಂತ್ರಿ ಪನ್ನೀರ ಸೆಲ್ವಂ ಅವರು ಈ ಭಾನುವಾರವೇ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲು ಸಾಧ್ಯಗೊಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.