ದೀಪಾವಳಿಗೆ ದೊಡ್ಡ ಅನಾಹುತ ನಡೆಸಲು ಸಂಚು: ಐವರು ಉಗ್ರರು ನುಸುಳಿರುವ ಶಂಕೆ
Team Udayavani, Oct 17, 2019, 3:38 PM IST
ಹೊಸದಿಲ್ಲಿ: ನೆರೆ ರಾಷ್ಟ್ರ ನೇಪಾಳದ ಮೂಲಕ ಭಾರತದ ಗಡಿಯೊಳಗೆ ಪ್ರವೇಶಿಸಿ ದೀಪಾವಳಿ ಹಬ್ಬದ ಸಮಯದಲ್ಲಿ ದೊಡ್ಡದೊಂದು ಅನಾಹುತ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆಂದು ಗುಪ್ತಚರ ಪಡೆ ವರದಿ ಮಾಡಿದೆ. ಕನಿಷ್ಠ ಪಕ್ಷ ಐವರು ಉಗ್ರರು ಭಾರತದೊಳಗೆ ಬರುವ ಪ್ರಯತ್ನದಲ್ಲಿದ್ದಾರೆಂದು ವರದಿಯಾಗಿದೆ.
ಉಗ್ರರ ನಡುವಿನ ದೂರವಾಣಿ ಕರೆಗಳನ್ನು ಭೇದಿಸಿರುವ ಗುಪ್ತಚರ ಪಡೆ ಈ ಮಾಹಿತಿ ಕಲೆಹಾಕಿದೆ. ಕೆಲವು ಭಯೋತ್ಪಾದಕರು ಶ್ರೀನಗರದಿಂದ ಬಂದು ದೆಹಲಿಯ ಇತರರನ್ನು ಕೂಡಿಕೊಳ್ಳುತ್ತಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಭಾರತ- ನೇಪಾಳ ಗಡಿ ಭಾಗದ ಗೋರಖ್ ಪುರ ಸಮೀಪದಿಂದ ಕೊನೆಯ ಕರೆ ಮಾಡಲಾಗಿದೆ. ದೇಶದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ.
ಉಗ್ರ ದಾಳಿಯ ಮುನ್ಸೂಚನೆಯ ಕಾರಣದಿಂದ ಪಂಜಾಬ್ ಮತ್ತು ಜಮ್ಮು ಕಾಶ್ಮೀರದ ಸೇನಾ ನೆಲೆಗಳಲ್ಲಿ ಬುಧವಾರ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು.