ಗಾಯದಿಂದಾಗಿ ಆನೆ ಹಲವು ದಿನಗಳಿಂದ ಆಹಾರ ಸೇವಿಸಿರಲಿಲ್ಲ
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತ ಪಟ್ಟ ಆನೆ ಮರಣೋತ್ತರ ಪರೀಕ್ಷೆಯ ಆತಂಕಕಾರಿ ವರದಿ
Team Udayavani, Jun 6, 2020, 11:15 AM IST
ತಿರುವನಂತಪುರ: ಅನಾನಸ್ ಪಟಾಕಿ ಸೇವಿಸಿ, ಸ್ಫೋಟಗೊಂಡು ಆಘಾತಕ್ಕೊಳಗಾದ ಆನೆ ಹಲವು ದಿನಗಳಿಂದ ಆಹಾರ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ! ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತ ಪಟ್ಟ ಗರ್ಭಿಣಿ ಆನೆಯ ಮರಣೋತ್ತರ ಪರೀಕ್ಷಾ ವರದಿ ಈ ಆತಂಕದ ಮಾಹಿತಿ ಹೊರ ಹಾಕಿದೆ. ತೀವ್ರ ಗಾಯದ ಪರಿಣಾಮ, 15 ವರ್ಷದ ಆನೆ ಹಸಿವಿನಿಂದಾಗಿಯೇ ಬಹುತೇಕ ಕುಗ್ಗಿಹೋಗಿತ್ತು. ಶ್ವಾಸಕೋಶ ಮತ್ತು ಇತರೆ ಒಳ ಅಂಗಾಂಗಗಳಿಗೆ ತೀವ್ರ ಘಾಸಿಯಾಗಿತ್ತು. ಕೊನೆಯ ಕ್ಷಣದಲ್ಲಿ ಶ್ವಾಸಕೋಶದ ವೈಫಲ್ಯ ಉಂಟಾಗಿದ್ದು, ಉಸಿರಾಟದ ತೊಂದರೆ ಯಿಂದಾಗಿ ಆನೆ ಸಾವನ್ನಪ್ಪಿದೆ ಎಂದು ಪರೀಕ್ಷಾ ವರದಿಗಳು ಹೇಳಿವೆ.
ಒಬ್ಬನ ಬಂಧನ: ಗರ್ಭಿಣಿ ಆನೆಯ ಕ್ರೂರ ಹತ್ಯೆಯ ಸಂಬಂಧ ಒಬ್ಬ ಆರೋಪಿಯನ್ನು ಕೇರಳ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅರಣ್ಯ ಸಚಿವ ಕೆ. ರಾಜು ಹೇಳಿದ್ದಾರೆ. ಬಂಧಿತ ಪಿ. ವಿಲ್ಸನ್ನನ್ನು ಎಸ್ಟೇಟ್ ಉದ್ಯೋಗಿ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಆರೋಪಿಗಳಿಗೆ ಹುಡುಕಾಟ ನಡೆದಿದೆ.
ಮನೇಕಾ ವಿರುದ್ಧ ದೂರು: ಆನೆ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕಿ, ವನ್ಯಜೀವಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ “ಮಲಪ್ಪುರಂ ತೀವ್ರ ಅಪರಾಧಗಳಿಂದಾಗಿಯೇ ಕುಖ್ಯಾತಿ ಹೊಂದಿದೆ’ ಎಂದು ಟ್ವೀಟಿಸಿದ್ದರು. ಈ ಸಂಬಂಧ ಮಲಪ್ಪುರಂನ ವಕೀಲ ಸುಭಾಷ್ಚಂದ್ರನ್ ದೂರು ದಾಖಲಿಸಿದ್ದಾರೆ. “ಆನೆ ಸಾವನ್ನಪ್ಪಿದ್ದು ಮಲಪ್ಪುರಂನಲ್ಲಿ ಅಲ್ಲ. ಪಾಲಕ್ಕಾಡ್ ಜಿಲ್ಲೆಯಲ್ಲಿ. ಹೀಗಿದ್ದರೂ ಮಲಪ್ಪುರಂ ಜನತೆಯನ್ನು ಮನೇಕಾ ಅವಮಾನಿಸಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.