“ದ ಕೇರಳ ಸ್ಟೋರಿ’ ನಿಷೇಧಕ್ಕೆ ಕಾರಣವೇನು?
Team Udayavani, May 13, 2023, 8:00 AM IST
ಹೊಸದಿಲ್ಲಿ: ವಿವಾದಿತ ಸಿನೆಮಾ “ದ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ಪಶ್ಚಿಮ ಬಂಗಾಲದಲ್ಲಿ ನಿಷೇಧ ವಿಧಿಸಿರುವುದಕ್ಕೆ ಸೂಕ್ತ ಕಾರಣ ತಿಳಿಸುವಂತೆ ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ನಿಷೇಧ ಪ್ರಶ್ನಿಸಿ ಸಿನೆಮಾ ತಂಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸಿದೆ. ಈ ವೇಳೆ ದೇಶದ ಬೇರೆ ರಾಜ್ಯಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಸಿನೆಮಾ ಪ್ರದರ್ಶನಗೊಳ್ಳುತ್ತಿದೆ. ಹೀಗಿರುವಾಗ ಪಶ್ಚಿಮ ಬಂಗಾಲದಲ್ಲಿ ಮಾತ್ರ ಏಕೆ ನಿಷೇಧಿಸಲಾಗಿದೆ? ಬೇರೆ ರಾಜ್ಯಗಳಿಗಿಂತ ಪ.ಬಂಗಾಲ ಹೇಗೆ ಭಿನ್ನ? ಜನರಿಗೆ ಇಷ್ಟವಿಲ್ಲದಿದ್ದರೆ ಅವರೇ ಸಿನೆಮಾವನ್ನು ನೋಡುವುದಿಲ್ಲ. ಈ ನಿಷೇಧದ ಹಿಂದಿನ ನಿಜವಾದ ಕಾರಣ ಏನು ಎಂದು ಪ್ರಶ್ನಿಸಿ, ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ ಸಿನೆಮಾ ಪ್ರದರ್ಶನಕ್ಕೆ ತಮಿಳುನಾಡಿನಲ್ಲಿ ಎದುರಾಗುತ್ತಿದ್ದ ಬೆದರಿಕೆ ನಿವಾರಿಸಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ತಮಿಳುನಾಡು ಸರಕಾರಕ್ಕೂ ನ್ಯಾಯಪೀಠ ಸೂಚಿಸಿದೆ.
ಮತ್ತೂಂದೆಡೆ “ದ ಕೇರಳ ಸ್ಟೋರಿ’ ಸಿನೆಮಾ ಬಿಡುಗಡೆಗೊಂಡ 7 ದಿನಗಳಲ್ಲೇ 81 ಕೋಟಿ ರೂ. ಗಳಿಕೆ ಕಂಡಿದ್ದು, ಇದು ತಂಡವನ್ನು ಮತ್ತಷ್ಟು ಜವಾ ಬ್ದಾರಿಯುತರನ್ನಾಗಿಸಿದೆ ಎಂದು ಸಿನೆಮಾ ನಿರ್ದೇಶಕ ಸುದೀಪೊ¤à ಸೇನ್ ಹೇಳಿದ್ದಾರೆ.