Sabarimala;ಪರಿಸ್ಥಿತಿ ಗಂಭೀರತೆಯಿಂದ ನಿಭಾಯಿಸುತ್ತಿದ್ದೇವೆ: ಸಿಎಂ ಪಿಣರಾಯಿ ವಿಜಯನ್
Team Udayavani, Dec 13, 2023, 4:04 PM IST
ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರಿಗೆ ಅನುಕೂಲವಾಗುವ ವ್ಯವಸ್ಥೆಗಳು ಇಲ್ಲವೆಂಬ ವಿಚಾರ ಭಾರಿ ಚರ್ಚೆಗೆ ಗುರಿಯಾದ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ”ಸರಕಾರವು ಸಂಪೂರ್ಣ ಪರಿಸ್ಥಿತಿಯನ್ನು ಅತ್ಯಂತ ಗಂಭೀರತೆಯಿಂದ ನಿಭಾಯಿಸಿದೆ ”ಎಂದು ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ”ಶಬರಿಮಲೆಯಲ್ಲಿ ನಿಯಂತ್ರಿಸಲಾಗದ ಪರಿಸ್ಥಿತಿ ಇಲ್ಲ. ಶಬರಿಮಲೆಯಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ. ಸರಕಾರವು ಸಂಪೂರ್ಣ ಪರಿಸ್ಥಿತಿಯನ್ನು ಅತ್ಯಂತ ಗಂಭೀರತೆಯಿಂದ ನಿಭಾಯಿಸಿದೆ ಮತ್ತು ನಾವು ಅದೇ ರೀತಿ ಮುಂದುವರಿಯುತ್ತೇವೆ. ಕಳೆದ ಮಂಡಲ ಋತುವಿನ ಮೊದಲ ದಿನಗಳಲ್ಲಿ ದಿನಕ್ಕೆ ಸರಾಸರಿ 62,000 ಯಾತ್ರಾರ್ಥಿಗಳ ಸಂಖ್ಯೆ ಡಿಸೆಂಬರ್ 6 ರಿಂದ 4 ದಿನಗಳಲ್ಲಿ ದಿನಕ್ಕೆ 88,000 ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಭಕ್ತರಿಗೆ ಅನುಕೂಲದ ಜತೆಗೆ 12 ಗಂಟೆಗೂ ಹೆಚ್ಚು ಕಾಲ ದೇವರ ದರ್ಶನಕ್ಕೆ ಕಾದು ನಿಲ್ಲಬೇಕಾದ ವಿಚಾರವೂ ಆಕ್ರೋಶಕ್ಕೆ ಕಾರಣವಾಗಿತ್ತು.
ಶಬರಿಮಲೆ ನಿರ್ವಹಣೆಯ ವಿಚಾರವಾಗಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿ “ಕೆಲವೊಮ್ಮೆ ವಿಪರೀತ ಭಕ್ತರ ಸಂದಣಿಯಿಂದ ಅವ್ಯವಸ್ಥೆ ಸಂಭವಿಸುತ್ತದೆ. ಇದು ಪ್ರಮುಖ ಕಾಲ ಮತ್ತು ಜನವರಿ 15 ರವರೆಗೆ ಮುಂದುವರಿಯುತ್ತದೆ.ಸಾಮಾನ್ಯವಾಗಿ ಪೊಲೀಸ್ ಪಡೆ ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ. ನಡೆದ ಘಟನೆಯ ಬಗ್ಗೆ ನನಗೆ ತುಂಬಾ ಬೇಸರವಾಗಿದೆ.ಸಾರ್ವಜನಿಕ ಪ್ರತಿನಿಧಿಗಳು ಘಟನೆಗೆ ಯಾರು ಹೊಣೆಗಾರರು ಎಂದು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.