ಮುಂಬಯಿಯಿಂದ ಆಟೋ, ಟ್ಯಾಕ್ಸಿ ವಲಸೆ! ; ಕನಸಿನ ನಗರದಿಂದ ಕಾಲುಕೀಳುತ್ತಿರುವ ಲಕ್ಷಾಂತರ ಚಾಲಕರು
Team Udayavani, May 12, 2020, 7:34 AM IST
ವಲಸೆ ಕಾರ್ಮಿಕರು ಜಬಲ್ಪುರದಿಂದ ಲಾರಿಗಳ ಮೂಲಕ ಸ್ವಗ್ರಾಮಕ್ಕೆ ತೆರಳಲು ಸಿದ್ಧರಾಗಿರುವುದು.
ಮುಂಬಯಿ: ಕೆಲವು ತಿಂಗಳುಗಳ ಹಿಂದೆ ಲಕ್ಷಾಂತರ ಯುವಜನರ ಪಾಲಿಗೆ ಡ್ರೀಮ್ ಸಿಟಿ ಎನಿಸಿದ್ದ ಮಂಬಯಿ, ಈಗ ಅದೇ ಜನರ ಎದೆಯಲ್ಲಿ ಭಯ ಹುಟ್ಟಿಸುತ್ತಿದೆ.
ತಾವು ನಿಂತು, ಕುಳಿತು, ಓಡಾಡಿ, ಆಟವಾಡಿದ ಗಲ್ಲಿಗಳೆಲ್ಲಾ ಇಂದು ಕೋವಿಡ್ ವೈರಸ್ನ ಮುಖವಾಡ ಹಾಕಿಕೊಂಡು ಕುಳಿತಿವೆ.
ಲಾಕ್ಡೌನ್ ದುಡಿಮೆ ಕಿತ್ತುಕೊಂಡಿದೆ, ಹೀಗಾಗಿ ನಿತ್ಯ ಸಾವಿರಾರು ವಲಸಿಗರು ತಮ್ಮ ಕನಸಿನ ನಗರದಿಂದ ಕಾಲುಕೀಳುತ್ತಿದ್ದಾರೆ.
ಹೊಟ್ಟೆ ಪಾಡಿಗಾಗಿ ಮಾಯಾನಗರಿಗೆ ಹೋಗಿ, ಅವರಿವರಲ್ಲಿ ಬೇಡಿ, ಸಾಲ ಮಾಡಿ ಟ್ಯಾಕ್ಸಿ, ಆಟೋ ರಿಕ್ಷಾ ಕೊಂಡು ಹೊಸ ಜೀವನ ಆರಂಭಿಸಿದ್ದ ಲಕ್ಷಾಂತರ ವಲಸಿಗರಿಗೆ ಇಂದು ಅದೇ ಮುಂಬಯಿ ಬೇಡವಾಗಿದೆ.
ಪ್ರತಿ ದಿನ 1000 ಆಟೋ ರಿಕ್ಷಾ ಚಾಲಕರು, 5000ದಷ್ಟು ಟ್ಯಾಕ್ಸಿ ಚಾಲಕರು ತಮ್ಮ ವಾಹನಗಳೊಂದಿಗೆ ಮುಂಬಯಿ ಬಿಟ್ಟು ಹೋಗುತ್ತಿದ್ದಾರೆ.
ಆಗ್ರಾ ಹೈವೇಯಲ್ಲಿ ಸಾಲು ಸಾಲು ‘ಕಾಲಿ ಪೀಲಿ’ (ಕಪ್ಪು ಹಳದಿ) ಟ್ಯಾಕ್ಸಿಗಳು ಮುಂಬಯಿಯತ್ತ ಬೆನ್ನು ಮಾಡಿ ಹೋಗುತ್ತಿವೆ.
ಲಾಕ್ಡೌನ್ ಕಾರಣ: ಈಗಾಗಲೇ ಎರಡು ತಿಂಗಳ ಲಾಕ್ಡೌನ್ನಿಂದ ಚಾಲಕರು ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಡುವೆ ಕೋವಿಡ್ ಲಾಕ್ಡೌನ್ ಮತ್ತಷ್ಟು ದಿನ ವಿಸ್ತರಣೆಯಾಗುವ ಅನುಮಾನದಿಂದ ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರು ತವರೂರು ಇಲ್ಲವೇ ದೇಶದ ಇತರ ರಾಜ್ಯಗಳತ್ತ ಮುಖ ಮಾಡಿದ್ದಾರೆ.
ಇವರಲ್ಲಿ ಕೆಲ ಕ್ಯಾಬ್ ಚಾಲಕರು ಕರ್ನಾಟಕದತ್ತ ಹೊರಟರೆ, ಉಳಿದವರು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಝರ್ಖಂಡ್ಗಳತ್ತ ಮುಖ ಮಾಡಿದ್ದಾರೆ.
ವಲಸೆ ಕಾರ್ಮಿಕರು ವಿವಿಧ ರಾಜ್ಯಗಳಿಂದ ತಮ್ಮ ರಾಜ್ಯಗಳತ್ತ ನಡೆದುಕೊಂಡು ಹೋಗಬಾರದು. ಕಾರ್ಮಿಕರು ವಿಶೇಷ ಶ್ರಮಿಕ್ ರೈಲುಗಳಲ್ಲೇ ಪ್ರಯಾಣಿಸುವಂತೆ ಕ್ರಮ ಕೈಗೊಳ್ಳಲು ಕೇಂದ್ರ ರಾಜ್ಯಗಳಿಗೆ ಸೂಚಿಸಿದೆ.