ಬಾಟಲಿಯಲ್ಲಿಟ್ಟು ಪಟಾಕಿ ಸಿಡಿಸಲು ವಿರೋಧ; ಯುವಕನನ್ನು ಚುಚ್ಚಿ ಕೊಂದ ಮೂವರು ಬಾಲಕರು
Team Udayavani, Oct 25, 2022, 12:38 PM IST
ಮುಂಬೈ: ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದನ್ನು ವಿರೋಧ ಮಾಡಿದ ಕಾರಣ ಮೂವರು ಬಾಲಕರು ಯುವಕನನ್ನು ಚುಚ್ಚಿ ಕೊಂದ ಘಟನೆ ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದಿದೆ.
14 ಮತ್ತು 15 ವರ್ಷ ಪ್ರಾಯದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 12 ವರ್ಷ ಪ್ರಾಯದ ಮತ್ತೋರ್ವ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಮೃತ ಯುವಕನನ್ನು 21 ವರ್ಷ ಪ್ರಾಯದ ಸುನೀಲ್ ನಾಯ್ಡು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಸೈಕಾಲಜಿಕಲ್ ಥ್ರಿಲ್ಲರ್ ‘ಆದ್ಯಂತ’ ಚಿತ್ರದ ಮೂಲಕ ರೀ-ಎಂಟ್ರಿ ಕೊಟ್ಟ ಮಯೂರಿ
ಶಿವಾಜಿ ನಗರದ ಪಾರೇಖ್ ಕಂಪೌಂಡ್ ನ ಬಯಲಿನಲ್ಲಿ 12 ವರ್ಷದ ಬಾಲಕ ಗಾಜಿನ ಬಾಟಲಿಯಲ್ಲಿಟ್ಟು ಪಟಾಕಿ ಸಿಡಿಸುತ್ತಿದ್ದ. ಇದನ್ನು ಕಂಡ ಸುನೀಲ್ ನಾಯ್ಡು ವಿರೋಧ ಮಾಡಿದ್ದಾನೆ. ಈ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಬಾಲಕನ ಸಹೋದರ 15 ವರ್ಷದ ಹುಡುಗ ಮತ್ತು 14 ವರ್ಷ ಪ್ರಾಯದ ಆತನ ಗೆಳೆಯ ಸ್ಥಳಕ್ಕೆ ಆಗಮಿಸಿದ್ದಾರೆ.
ಮೂವರು ಸೇರಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ 15 ವರ್ಷದ ಹುಡುಗ ಚಾಕುವಿನಲ್ಲಿ ಹಲವು ಬಾರಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಕೂಡಲೇ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.