‘ಪುಟಿನ್ ನಿಮ್ಮ ಮಾತು ಕೇಳುತ್ತಾರೆ..’; ಯುದ್ಧ ನಿಲ್ಲಿಸಲು ಮೋದಿ ಮಧ್ಯಸ್ಥಿಕೆ ಬಯಸಿದ ಉಕ್ರೇನ್
Team Udayavani, Feb 24, 2022, 3:01 PM IST
ಹೊಸದಿಲ್ಲಿ: ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಈ ನಡುವೆ ಭಾರತದ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
ಬಿಕ್ಕಟ್ಟನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ಇಗೊರ್ ಪೊಲಿಖಾ, “ಭಾರತವು ರಷ್ಯಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನವದೆಹಲಿ ಹೆಚ್ಚು ಸಕ್ರಿಯ ಪಾತ್ರ ವಹಿಸುತ್ತದೆ” ಎಂದು ಹೇಳಿದರು.
“ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ನಮ್ಮ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಕ್ಷಣವೇ ಸಂಪರ್ಕಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇವೆ” ಎಂದು ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಹೇಳಿದ್ದಾರೆ.
“ಎಷ್ಟು ವಿಶ್ವ ನಾಯಕರ ಮಾತನ್ನು ಪುಟಿನ್ ಕೇಳುತ್ತಾರೆಂದು ನನಗೆ ತಿಳಿದಿಲ್ಲ, ಆದರೆ, ಮೋದಿಯವರ ಬಗ್ಗೆ ನನಗೆ ಭರವಸೆ ಮೂಡಿಸಿದೆ. ಅವರ ಬಲವಾದ ಧ್ವನಿಯಿಂದಾಗಿ, ಕನಿಷ್ಠ ಪುಟಿನ್ ಯೋಚಿಸುವಂತೆ ಮಾಡುತ್ತಾರೆ. ನಾವು ಭಾರತ ಸರಕಾರದಿಂದ ಹೆಚ್ಚು ಅನುಕೂಲಕರವಾದ ಮನೋಭಾವವನ್ನು ನಿರೀಕ್ಷಿಸುತ್ತಿದ್ದೇವೆ’’ ಎಂದರು.
ಇದನ್ನೂ ಓದಿ:ಉಕ್ರೇನ್ ಮೇಲ್ಯಾಕೆ ರಷ್ಯಾ ಕಣ್ಣು? ವಿವಾದದ ಮೂಲವೇನು? NATO ಕಂಡರೆ ಪುಟಿನ್ ಗೆ ಯಾಕೆ ಉರಿ?
“ಇದು ಘೋರ ಆಕ್ರಮಣದ ಪ್ರಕರಣವಾಗಿದೆ. ನಾವು ಸಾವುನೋವುಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಅವರು ಮಿಲಿಟರಿ ಸೌಲಭ್ಯಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ, ಆದರೆ ನಾವು ನಾಗರಿಕ ಸಾವುನೋವುಗಳನ್ನು ಕೂಡಾ ಅನುಭವಿಸುತ್ತಿದ್ದೇವೆ” ಎಂದು ಉಕ್ರೇನ್ ರಾಯಭಾರಿ ಇಗೊರ್ ಪೋಲಿಖಾ ಹೇಳಿದ್ದಾರೆ.
ಭಾರತೀಯ ಕಾಲಮಾನ ಪ್ರಕಾರ ಇಂದು ಬೆಳಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಘೋಷಿಸಿದ್ದಾರೆ. ಉಕ್ರೇನ್ ನ ಹಲವು ನಗರಗ ಮೇಳೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ.