ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಮೇಲೆ ಹಲ್ಲೆ
Team Udayavani, Jul 15, 2022, 8:58 PM IST
ಲಕ್ನೋ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತನೊಬ್ಬನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ 10 ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದು, ಓರ್ವ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಬುದೌನ್ನವರಾಗಿರುವ ಆರ್ಎಸ್ಎಸ್ ಪ್ರಚಾರಕ ಆರ್ಯನೇಂದ್ರ ಕುಮಾರ್ ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಅವರನ್ನು ನೋಡಿಕೊಂಡು ಮನೆಗೆ ಆರ್ಯನೇಂದ್ರ ಮರಳುತ್ತಿದ್ದರು.
ಈ ವೇಳೆ ರಸ್ತೆಯಲ್ಲಿ ಆರ್ಯ ಅವರ ಹಿಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಂಕಿತ್ ಕುಮಾರ್ ವಾಹನ ಬಂದಿದ್ದು, ಅದಕ್ಕೆ ದಾರಿ ಮಾಡಿಕೊಡಲಿಲ್ಲವೆಂದು ಅಂಕಿತ್ ಆರ್ಯ ಬಗ್ಗೆ ಸಿಟ್ಟಾಗಿದ್ದಾರೆ. ಅವರನ್ನು ಪೊಲೀಸ್ ಪೋಸ್ಟ್ಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ಅಂಕಿತ್ರನ್ನು ಅಮಾನತು ಮಾಡಲಾಗಿದೆ.