ತೆರಿಗೆ ಪಾವತಿಸಿದರೆ ವಿವಿಐಪಿ ಸೌಲಭ್ಯ!
Team Udayavani, Jul 5, 2019, 5:38 AM IST
ಹೊಸದಿಲ್ಲಿ:ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುವ ಪ್ರಾಮಾಣಿಕ ತೆರಿಗೆದಾರರಿಗೆ ಇನ್ನು ಮುಂದೆ ‘ರಾಜತಾಂತ್ರಿಕ ಮಾದರಿ ಸೌಲಭ್ಯ’ಗಳು ದೊರೆಯಲಿವೆ!
ಹೌದು, ದೇಶದಲ್ಲಿನ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎನ್ನುವ ಪ್ರಧಾನಿ ಮೋದಿ ಆಶಯಕ್ಕೆ ಪೂರಕವಾಗಿ ಇಂಥ ಸಲಹೆಗಳನ್ನು ಆರ್ಥಿಕ ಸಮೀಕ್ಷಾ ವರದಿಯಲ್ಲಿ ನೀಡಲಾಗಿದೆ. ಅದರಂತೆ, ದೇಶದ ಪ್ರತಿ ಜಿಲ್ಲೆಯ ಟಾಪ್ 10 ತೆರಿಗೆದಾರರನ್ನು ಆಯ್ಕೆ ಮಾಡಿ, ಅವರಿಗೆ ವಿಶೇಷ ಗೌರವ ಸಲ್ಲಿಸಲು ಸಲಹೆ ನೀಡಲಾಗಿದೆ.
ಅಂದರೆ, ವಲಸೆ ಕೌಂಟರ್ಗಳು, ಏರ್ಪೋರ್ಟ್ನಲ್ಲಿ ತುರ್ತು ಬೋರ್ಡಿಂಗ್ಗೆ ಅವಕಾಶ, ರಸ್ತೆಗಳು ಹಾಗೂ ಟೋಲ್ ಬೂತ್ಗಳಲ್ಲಿ ಮೊದಲ ಲೇನ್ಗಳಲ್ಲಿ ಸಾಗಲು ಅವಕಾಶ ನೀಡಲಾಗುತ್ತದೆ. ಅಷ್ಟೇ ಅಲ್ಲ, ಅವರ ಹೆಸರನ್ನು ರಸ್ತೆಗಳಿಗೆ, ಸ್ಮಾರಕಗಳಿಗೆ, ಆಸ್ಪತ್ರೆಗಳಿಗೆ ಇರಿಸಬೇಕು ಎಂಬ ಸಲಹೆಯನ್ನೂ ಮಾಡಲಾಗಿದೆ.
ತೆರಿಗೆ ಪಾವತಿದಾರರ ಕ್ಲಬ್: ಜೀವ ವಿಮೆ ಏಜೆಂಟರ ಕ್ಲಬ್ ಮಾದರಿಯಲ್ಲಿ ಇನ್ನು ಮುಂದೆ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರ ಕ್ಲಬ್ ಇರಲೂಬಹುದು. ಮುಂದಿನ ದಿನಗಳಲ್ಲಿ ‘ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವುದು ಗೌರವ ತಂದು ಕೊಡುತ್ತದೆ’ (paying taxes honestly is honourable) ಎಂಬ ಧ್ಯೇಯ ವಾಕ್ಯ ರೂಪಿಸುವಂತೆಯೂ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ನೇತೃತ್ವದ ತಂಡ ರೂಪಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಸಲಹೆ ನೀಡಲಾಗಿದೆ.
5 ಶತಕೋಟಿ ಡಾಲರ್ ಗುರಿ: ಪ್ರಧಾನಿ ಮೋದಿ 2024-25ನೇ ವಿತ್ತೀಯ ವರ್ಷದ ವೇಳೆ ದೇಶದ ಅರ್ಥ ವ್ಯವಸ್ಥೆಯನ್ನು 5 ಲಕ್ಷಕೋಟಿ ಡಾಲರ್ ಮೊತ್ತಕ್ಕೆ ಏರಿಸುವ ಗುರಿ ಹಾಕಿಕೊಂಡಿದ್ದಾರೆ. ಅದಕ್ಕಾಗಿ ಜಿಡಿಪಿ ಪ್ರಮಾಣವನ್ನು ಶೇ.8ರ ದರದಲ್ಲಿಯೇ ಕಾಪಿಟ್ಟುಕೊಳ್ಳಬೇಕಾದ ಸವಾಲು ಸರಕಾರಕ್ಕೆ ಇದೆ. ಅದಕ್ಕಾಗಿ ಸಮರ್ಪಕ ಉಳಿತಾಯ, ಬಂಡವಾಳ ಹೂಡಿಕೆ ಮತ್ತು ರಫ್ತು ಪ್ರಮಾಣ ಅಗತ್ಯ ಎಂದು ಸಮೀಕ್ಷೆಯಲ್ಲಿ ಸೂಚ್ಯವಾಗಿ ತಿಳಿಸಲಾಗಿದೆ. ಸದ್ಯ ದೇಶ ವಿಶ್ವದ ಆರನೇ ಬೃಹತ್ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಮುಂದಿನ ವಿತ್ತೀಯ ವರ್ಷದಲ್ಲಿ ಅದು ಬ್ರಿಟನ್ ಅನ್ನು ಮೀರಿಸಿ, ವಿಶ್ವದ ಐದನೇ ಬೃಹತ್ ವಿತ್ತೀಯ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ನಿರೀಕ್ಷೆ ಹೊಂದಿದೆ.
ಹೂಡಿಕೆ ಪ್ರಮಾಣ ಏರಿಕೆ: 2011-12ನೇ ವಿತ್ತೀಯ ವರ್ಷದಿಂದ ಬಂಡವಾಳ ಹೂಡಿಕೆ ಪ್ರಮಾಣ ತಗ್ಗಿರುವಂತೆಯೇ ಗ್ರಾಹಕರಿಂದ ವಿವಿಧ ಅಂಶಗಳಿಗೆ ಸಂಬಂಧಿಸಿದ ಬೇಡಿಕೆ ವೃದ್ಧಿ ಮತ್ತು ಬ್ಯಾಂಕ್ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿಕೆ ಹೆಚ್ಚಳದಿಂದ ಹೂಡಿಕೆ ಪ್ರಮಾಣ ವೃದ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ತೆರಿಗೆ ಸಂಗ್ರಹದ ಮೇಲೆ ಪ್ರಭಾವ: ಅರ್ಥ ವ್ಯವಸ್ಥೆಯ ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ತೆರಿಗೆ ಸಂಗ್ರಹದ ಮೇಲೆ ಪ್ರಭಾವ ಬೀರಿದೆ. ಕೃಷಿ ಕ್ಷೇತ್ರದ ಮೇಲೆ ಸರಕಾರ ಹೆಚ್ಚಿನ ವೆಚ್ಚ ಮಾಡುವುದರಿಂದ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
2019-20ರ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು
• ಆಮದು ಪ್ರಮಾಣ ಶೇ.15.4ರಷ್ಟು, ರಫ್ತು ಪ್ರಮಾಣ ಶೇ.12.5 ಹೆಚ್ಚಳ ನಿರೀಕ್ಷೆ
• 283.4 ದಶಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷೆ
• 422.2 ಶತಕೋಟಿ ಡಾಲರ್ ವಿದೇಶಿ ವಿನಿಮಯ ಮೀಸಲು ನಿಧಿ
• ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್ಎಂಇ) ಉದ್ದಿಮೆಗಳ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಗುಣಮಟ್ಟದ ಉತ್ಪಾದನೆಗೆ ಆದ್ಯತೆ.
• ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ, ಇಳಿ ವಯಸ್ಸಿನ ಜನರಿಗಾಗಿ ನೀತಿ, ಹಂತ ಹಂತವಾಗಿ ನಿವೃತ್ತಿ ವಯಸ್ಸು ಏರಿಕೆ.
• ಕೆಳ ಹಂತದ ನ್ಯಾಯಾಲಯಗಳ ಮಟ್ಟದಲ್ಲಿ ವ್ಯಾಪಕ ಸುಧಾರಣೆ, ಸರಿಯಾದ ರೀತಿಯಲ್ಲಿ ಕಾರ್ಮಿಕ ಕ್ಷೇತ್ರದ ಸುಧಾರಣೆ.
• 2019-20ರಲ್ಲಿ ಶೇ.7 ಜಿಡಿಪಿ ದರ ನಿರೀಕ್ಷೆ. ಕಳೆದ ಬಾರಿ ಇದು ಶೇ.6.8 ಇತ್ತು
• ಬಂಡವಾಳ ಹೂಡಿಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಅರ್ಥ ವ್ಯವಸ್ಥೆ ಬೆಳವಣಿಗೆ
• 2024-25ನೇ ಸಾಲಿನಲ್ಲಿ 5 ಲಕ್ಷಕೋಟಿ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ಶೇ.8 ದರದ ಜಿಡಿಪಿ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ
• ಕಚ್ಚಾ ತೈಲದ ಬೆಲೆ ಇಳಿಕೆ ನಿರೀಕ್ಷೆ.
• ವಿತ್ತೀಯ ಕೊರತೆ ಪ್ರಮಾಣ 2018-19ರಲ್ಲಿ ಶೇ.5.8. ಹಿಂದಿನ ವಿತ್ತ ವರ್ಷದಲ್ಲಿ ಶೇ.6.4ರಷ್ಟು ಇತ್ತು.
ಸಬ್ಸಿಡಿ ಪ್ರಮಾಣ ನಿಯಂತ್ರಣ
ಕೃಷಿ ಕ್ಷೇತ್ರದಲ್ಲಿ ನೀರಿನ ಬಳಕೆ ಮಿತವ್ಯಯಿಯಾಗಬೇಕು
ತೆರಿಗೆ ತಪ್ಪಿಸದಿರಲು ಧರ್ಮ ಸೂತ್ರ
ಇಂದು ಕೇಂದ್ರ ಬಜೆಟ್ ಮಂಡನೆ
ಉದ್ಯೋಗ ಸೃಷ್ಟಿಗೆ ಆದ್ಯತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Cyber attack: ಭದ್ರತೆ ಹೆಚ್ಚಿಸಲು ಬ್ಯಾಂಕ್ಗಳಿಗೆ ಆರ್ಬಿಐ ಸೂಚನೆ
ED; ದಿಲ್ಲಿ ಲಿಕ್ಕರ್ ಕೇಸ್ ಡೀಲ್ಗೆ ಕೆಸಿಆರ್ ಪುತ್ರಿ ಕವಿತಾ ಸಂಚು