ಅಮರನಾಥ ಯಾತ್ರೆ ಪುನಾರಂಭ? ಜಮ್ಮುಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ನಿರ್ಧಾರವೇ ಅಂತಿಮ
Team Udayavani, Jul 11, 2022, 6:50 AM IST
ಶ್ರೀನಗರ: ಮೇಘಸ್ಫೋಟದ ಪರಿಣಾಮ ನಿಂತು ಹೋಗಿದ್ದ ಅಮರನಾಥ ಯಾತ್ರೆ ಮಂಗಳವಾರ ದಿಂದ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.
ಯೋಧರು, ಪರ್ವತ ಸುರಕ್ಷಾ ತಂಡ, ಮತ್ತಿತರ ಸಿಬಂದಿ ಪರಿಸ್ಥಿತಿ ಯನ್ನು ತಹಬದಿಗೆ ತರಲು ತೀವ್ರವಾಗಿ ಶ್ರಮಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯಪಾಲ ಮನೋಜ್ ಸಿನ್ಹಾ ಅವರು ಅಧಿಕಾರಿಗಳು, ಭದ್ರತಾ ಸಿಬಂದಿ ಜತೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಎಷ್ಟೇ ಪ್ರವಾಹ ಬಂದಿದ್ದರೂ ರಸ್ತೆಗಳ ಪರಿಸ್ಥಿತಿ ಚೆನ್ನಾಗಿಯೇ ಇದೆ. ಆದ್ದರಿಂದ ಯಾತ್ರೆ ಮುಂದುವರಿಸಬಹುದು, ಅಲ್ಲದೇ ಈಗಾಗಲೇ ದರ್ಶನಕ್ಕೆ ಬುಕ್ ಮಾಡಿರುವ ಯಾತ್ರಿಗಳಿಗೆ ತೊಂದರೆಯಾಗಬಾರದು ಎನ್ನುವುದು ಸ್ಥಳೀಯ ಸರಕಾರದ ಉದ್ದೇಶವಾಗಿದೆ.
ಈ ಬಗ್ಗೆ ಅಂತಿಮ ನಿರ್ಧಾರದ ಅಧಿಕಾರವನ್ನು ಕೇಂದ್ರ ಸರಕಾರ, ಜಮ್ಮುಕಾಶ್ಮೀರದ ರಾಜ್ಯಪಾಲರಿಗೆ ಬಿಟ್ಟಿದೆ.
ಕಳೆದ ಶುಕ್ರವಾರ ಜಮ್ಮುಕಾಶ್ಮೀರದ ಅಮರನಾಥ ಗುಹಾ ದೇವಸ್ಥಾನದ ಸನಿಹ ಮೇಘಸ್ಫೋಟ ಸಂಭವಿಸಿ, ತೀವ್ರ ಮಳೆ ಸುರಿದಿತ್ತು. ಇದರಿಂದ ಪ್ರವಾಹವುಕ್ಕಿ 16 ಮಂದಿ ಮೃತಪಟ್ಟಿದ್ದರು. ಭದ್ರತಾ ಸಿಬಂದಿ ಅತ್ಯಾಧುನಿಕ ಸಾಧನಗಳೊಂದಿಗೆ ಪರಿಹಾರ ಕಾರ್ಯಾ ಚರಣೆಯನ್ನು ಎಡೆಬಿಡದೇ ನಡೆಸುತ್ತಿದ್ದಾರೆ.
ಹಲವಾರು ಮಂದಿ ಅವಶೇಷಗಳಡಿ ಈಗಲೂ ಸಿಲುಕಿರುವ ಸಾಧ್ಯತೆಯಿದೆ.
ಗಾಯಗೊಂಡ 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 15,000 ಮಂದಿಯನ್ನು ಸುರಕ್ಷತ ಕ್ರಮವಾಗಿ ಮೂಲನೆಲೆಗೆ ಮರಳಿ ಕಳುಹಿಸಲಾಗಿದೆ.
ಭೀಕರ ದೃಶ್ಯಗಳು: ಅಮರನಾಥ ಯಾತ್ರೆಗೆ ತೆರಳಿ ನಿಗದಿತ ಟೆಂಟ್ಗಳಲ್ಲಿ ಉಳಿದುಕೊಂಡಿ ರುವ ಯಾತ್ರಾರ್ಥಿಗಳು ಹಲವು ಭೀಕರ ದೃಶ್ಯಗಳನ್ನು ನೋಡಿದ್ದಾರೆ. ಪ್ರವಾಹ ಯಾವಾಗ, ಎಲ್ಲಿ ಸಂಭವಿಸಿತು ಎನ್ನುವುದನ್ನು ಕಣ್ಣಾರೆ ಕಂಡು ದಿಕ್ಕಾಪಾಲಾಗಿ ಓಡಿ ಹೋದವರೂ ಇದ್ದಾರೆ. ಕೂಗುತ್ತ, ಸಹಾಯಕ್ಕಾಗಿ ಜನರ ಮೊರೆಯಿಡುತ್ತಿರುವ ವೀಡಿಯೋಗಳು ಸಿಕ್ಕಿವೆ.
ಪವಿತ್ರ ಗುಹೆಯ
ಬಳಿಯೇ ಪ್ರವಾಹ!
ಅಮರನಾಥ ಪ್ರಾಂತದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪವಿತ್ರ ಅಮರನಾಥ ಗುಹೆಯ ಬಳಿಯಲ್ಲೇ ಮಳೆಯ ನೀರು ಪ್ರವಾಹದಂತೆ ಹರಿಯುತ್ತಿರುವ ವೀಡಿಯೋವೊಂದು ಇಂಟರ್ನೆಟ್ನಲ್ಲಿ ರವಿವಾರ ಹರಿದಾಡಿದೆ. ಗುಹೆಗಿಂತ ಕೆಲವು ಕಿಲೋಮೀಟರ್ಗಳ ದೂರದಿಂದಲೇ ಗುಹೆಯ ಬಳಿ ಮಳೆಯ ನೀರು ಜಲಪಾತದಂತೆ ಧಾರಾಕಾರವಾಗಿ ಧುಮುಕುತ್ತಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ. ಇದರಿಂದಾಗಿ ಗುಹೆಯ ಹತ್ತಿರಕ್ಕೂ ಹೋಗುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ, ಹಾಗಾಗಿ ಯಾತ್ರೆಯನ್ನು ತಟಸ್ಥಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.