ಅರುಣೋದಯ ಕಲಾನಿಕೇತನ ಮುಂಬಯಿ ವಜ್ರ ಮಹೋತ್ಸವ ಸಂಭ್ರಮ
Team Udayavani, Dec 4, 2018, 3:53 PM IST
ಮುಂಬಯಿ: ನಗರದ ಪ್ರತಿಷ್ಠಿತ ಅರುಣೋದಯ ಕಲಾನಿಕೇ ತನ ಸಂಸ್ಥೆಯ ವಜ್ರ ಮಹೋತ್ಸವ ಸಂಭ್ರಮವು ನ. 25ರಂದು ಚೆಂಬೂರು ಫೈನ್ಆಟ್ಸ್ ಸೊಸೈಟಿಯ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ಜರಗಿತು.
ಅರುಣೋದಯ ಕಲಾನಿಕೇತನ ಸಂಸ್ಥೆಯ ನೃತ್ಯ ಗುರು ಡಾ| ಮೀನಾಕ್ಷೀ ರಾಜು ಶ್ರೀಯಾನ್ ಅವರ ನೇತೃತ್ವದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಊರ-ಪರವೂರಿನ 60 ಮಂದಿ ಸಾಧಕರನ್ನು ಸಮ್ಮಾನಿಸಲಾಗುವುದು. ಮುಂಬಯಿ ಸಾಧಕರಾದ ಯಕ್ಷಗಾನ ಕಲಾವಿದ ಕೆ. ಕೆ. ಶೆಟ್ಟಿ, ಸಂಘಟಕ ಬಾಲಚಂದ್ರ ಬಿ. ರಾವ್, ರಂಗಕರ್ಮಿ-ಸಂಘಟಕ ವಿ. ಕೆ. ಸುವರ್ಣ, ರಂಗಕರ್ಮಿ ಅನಿಲ್ ಕುಮಾರ್ ಹೆಗ್ಡೆ, ಸಾಹಿತಿ, ರಂಗಕರ್ಮಿ ನಂದಳಿಕೆ ನಾರಾಯಣ ಶೆಟ್ಟಿ, ರಂಗಕರ್ಮಿ ಕಮಲಾಕ್ಷ ಸರಾಫ್, ರಂಗಕರ್ಮಿ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಯಕ್ಷಗಾನ ಕಲಾವಿದೆ ಗೀತಾ ಭಟ್, ನೃತ್ಯ ಕಲಾವಿದೆ ಶೈಲಜಾ ಮಧುಸೂದನ್, ಕೊಳಲು ವಾದಕ ರಾಘವೇಂದ್ರ ಬಾಳಿಗ, ಸಂಗೀತಕಾರ ಶ್ರೀಪತಿ ಹೆಗ್ಡೆ, ಚೆಂಡೆ ವಾದಕ ಪ್ರವೀಣ್ ಶೆಟ್ಟಿ ಎಕ್ಕಾರು, ಸಂಘಟಕ-ಸಮಾಜ ಸೇವಕ ಜಿ. ಟಿ. ಆಚಾರ್ಯ, ಸಂಗೀತ ಕಲಾವಿದ ಪದ್ಮನಾಭ ಸಸಿಹಿತ್ಲು, ಹರೀಶ್ ಪೂಜಾರಿ, ಕವಿರಾಜ್ ಸುವರ್ಣ, ಕುತ್ಪಾಡಿ ರಾಮಚಂದ್ರ ಗಾಣಿಗ ಮೊದಲಾದವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ವಿದ್ಯಾವಿಹಾರ್ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಮಂದಿರದ ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್, ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಸಮಾಜ ಸೇವಕಿ, ಓಂಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಇದರ ಅಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಸಮಾಜ ಸೇವಕಿ ಗೀತಾ ಎ. ಶೆಟ್ಟಿ, ಉದ್ಯಮಿ ಅಶೋಕ್ ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ರಮೇಶ್ ಎಂ. ಬಂಗೇರ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಉಪಾಧ್ಯಕ್ಷ ಕಮಲಾಕ್ಷ ಸರಾಫ್, ಉದ್ಯಮಿ ಪ್ರದೀಪ್ ಎಂ. ಚಂದನ್, ಉದ್ಯಮಿ ರಾಜೀವ ಎಂ. ಚಂದನ್ ಅವರು ಉಪಸ್ಥಿತರಿದ್ದರು.
ಪತ್ರಕರ್ತ ದಯಾ ಸಾಗರ್ ಚೌಟ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಸುರೇಶ್ ಕಾಂಚನ್, ಸಂಜೀವ ಕೆ. ಸಾಲ್ಯಾನ್, ಗೋಪಾಲ್ ಪುತ್ರನ್ ಹಾಗೂ ರಾಜು ಶ್ರೀಯಾನ್ ಅವರು ಅತಿಥಿಗಳನ್ನು ಗೌರವಿಸಿದರು.