ಮುಂಬಯಿ ಬಂಟರ ಸಂಘ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ: ಚಂದ್ರಹಾಸ ಕೆ. ಶೆಟ್ಟಿ
Team Udayavani, Mar 10, 2021, 6:42 PM IST
ಮುಂಬಯಿ: ಮುಂಬಯಿ ಬಂಟರ ಸಂಘವು ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಕಾರಣ ಸಂಘಕ್ಕೆ ನಮ್ಮ ಹಿರಿಯರು ನೀಡಿದಂತಹ ಕೊಡುಗೆ ಮುಖ್ಯವಾಗಿದೆ. ಸಂಸ್ಥೆಯು ಅಂದಿನಿಂದ ಇಂದಿನವರೆಗೂ ಶಿಸ್ತಿನ ಚೌಕಟ್ಟನ್ನು ಮೀರಿಲ್ಲ. ಸಂಘದ ನಿಯಮಾವಳಿಗಳ ಪ್ರಕಾರ ನಡೆದು ಬಂದು ಸಮಾಜಕ್ಕೆ ಉತ್ತಮ ಸೇವೆಗಳು ಲಭಿಸಿವೆ. ಮುಂದಿನ ದಿನಗಳಲ್ಲೂ ನಾವು ಮಾಡುವ ಕೆಲಸ ಕಾರ್ಯಗಳ ಬಗ್ಗೆ ಸಮಾಜವೇ ಖುಷಿಯಿಂದ ಹೇಳಬೇಕು. ಸಮಯ ಪ್ರಜ್ಞೆಯೊಂದಿಗೆ ಕೆಲವು ಬಂದಲಾವಣೆಗಳೊಂದಿಗೆ ನಾವು ಮುಂದುವರಿಯೋಣ. ಮುಂದಿನ ದಿನಗಳಲ್ಲಿ ಸಂಘದಿಂದ ಪಡೆದ ಸವಲತ್ತುಗಳಿಂದ ಫಲಾನುಭವಿಗಳು ಎತ್ತರಕ್ಕೆ ಬೆಳೆದು ನಿಲ್ಲುವಂತಾಗಲಿ ಎಂದು ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ತಿಳಿಸಿದರು.
ಮಾ. 6ರಂದು ಸಂಜೆ ವಸಾಯಿ ಪೂರ್ವದ ರುಧ್ರ ಶೆಲ್ಫರ್ ಸಭಾಂಗಣದಲ್ಲಿ ನಡೆದ ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಪ್ರಸಕ್ತ ಸಾಲಿನ ಸಂಘದ ಪ್ರಪ್ರಥಮ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಯೋಜನಾಭಿವೃದ್ಧಿಗಳ, ಸೇವಾ ಸವಲತ್ತುಗಳ ಬಗ್ಗೆ ವಿವರಿಸಿದರು. ಹಿರಿಯರ ಸೇವೆಗಳನ್ನು ನೆನಪಿಸಿದ ಅವರು ಸಂಘವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಲಾಡ್ಯಗೊಳಿಸುವ ಬಗ್ಗೆ ವಿನಂತಿಸಿದರು.
ಮುಖ್ಯ ಅತಿಥಿಯಾಗಿದ್ದ ನಗರದ ಮಾಜಿ ಮೇಯರ್ ಪ್ರವೀಣ್ ಸಿ. ಶೆಟ್ಟಿ ಮಾತನಾಡಿ, ಪ್ರಾದೇಶಿಕ ಸಮಿತಿಗೆ ಶುಭ ಕೋರಿದರು. ನೂತನ ಕಾರ್ಯಾಧ್ಯಕ್ಷ ಪರೀಶ್ ಪಾಂಡು ಶೆಟ್ಟಿಯವರ ಕೆಲಸ ಕಾರ್ಯಗಳ ಬಗ್ಗೆ ಪ್ರಶಂಶಿಸಿ ಅವರ ನಿಕಟ ಒಡನಾಟ ಹಾಗೂ ಸಮಾಜಮುಖೀ ಕೆಲಸಗಳ ಬಗ್ಗೆ ವಿವರಿಸಿ ಪರಿಸರದಲ್ಲಿ ಸಮಾಜ ಬಾಂಧವರಿಗೆ ಸೇವಾ ನಿಟ್ಟಿನಲ್ಲಿ ಅವರು ಮಾದರಿಯಾಗಲಿದ್ದಾರೆ. ಮಹಾಮಾರಿ ಸಂಕಷ್ಟದ ಸಂದರ್ಭದಲ್ಲಿ ಅವರು ಹಾಗೂ ಇಲ್ಲಿನ ನಮ್ಮೂರ ಸಂಘ-ಸಂಸ್ಥೆಗಳ ಸೇವೆ ಅಪಾರವಾಗಿದೆ. ಸಮಾಜಕ್ಕೆ ಮನಪಾ ವತಿಯಿಂದ ಹೆಚ್ಚಿನ ಸೇವೆಗಳು ಸಿಗುವಂತಾಗಲು ಪ್ರಯತ್ನಿಸುತ್ತೇನೆ ಎಂದರು.
ನಿರ್ಗಮನ ಕಾರ್ಯಾಧ್ಯಕ್ಷ ಜಯಂತ ಪಕ್ಕಳ ಮಾತನಾಡಿ, ತನ್ನ ಸೇವಾವಧಿಯಲ್ಲಿ ಶಶಿಧರ ಶೆಟ್ಟಿಯವರ ನಿಸ್ವಾರ್ಥ ಸೇವೆ ಹಾಗೂ ಬೆಂಬಲ, ಸಮಿತಿಯವರ ಪೂರ್ಣ ಬೆಂಬಲದಿಂದ ಉತ್ತಮ ಕೆಲಸ ಕಾರ್ಯಗಳು ನಡೆದಿದ್ದು, ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಮುಂದೆಯೂ ನನ್ನ ಸಲಹೆ-ಸಹಕಾರಗಳು ಮುಂದುವರಿಯಲಿವೆ. ಮಹಿಳಾ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ಹಾಗೂ ಸಮಿತಿಯ ಎಲ್ಲ ಮಹಿಳಾ ವೃಂದವು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ತಿಳಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ ದಂಪತಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರಿತ್ ಶೆಟ್ಟಿ ಸಹೋದರರನ್ನು ಗೌರವಿಸಲಾಯಿತು. ನೂತನ ಕಾರ್ಯಾಧ್ಯಕ್ಷ ಹರೀಶ್ ಪಾಂಡು ಶೆಟ್ಟಿ ಅವರನ್ನು ಪೇಟ ತೊಡಿಸಿ, ಶಾಲು ಹೊದೆಸಿ, ಫಲ – ಪುಷ್ಪವನ್ನಿತ್ತು ಅಭಿನಂದಿಸಿ ಗೌರವಿಸಲಾಯಿತು. ನೂತನ ಉಪ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕಣಂಜಾರು, ಮಂಜುನಾಥ ಶೆಟ್ಟಿ ಕೊಡ್ಲಾಡಿ, ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಪಳ್ಳಿ, ಸತತ ಮೂರನೆ ಬಾರಿಗೆ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಜಯ ಎಂ. ಶೆಟ್ಟಿ, ನೂತನ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ ಕರ್ನಿರೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಬಂಟರ ಸಂಘದ ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ ಉಳ್ತೂರು, ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಸಮನ್ವಯಕ ಶಶಿಧರ್ ಕೆ. ಶೆಟ್ಟಿ ಇನ್ನಂಜೆ ಮೊದಲಾದವರಿದ್ದರು.
ಸಭೆಯಲ್ಲಿ ಜತೆ ಕಾರ್ಯದರ್ಶಿ ಇಂದ್ರಾಳಿ ದಿವಾಕರ ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಬಂಟರ ವಾಣಿ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ , ವಿವಿಧ ಸಮಿತಿಗಳಿಂದ ಆಗಮಿಸಿದ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮಹಿಳಾ ಸದಸ್ಯೆಯರಿಂದ ಭಜನೆ, ಪುಟಾಣಿಗಳಿಂದ ನೃತ್ಯ ವೈಭವ, ಗಣೇಶ್ ಎರ್ಮಾಳ್ ಇವರಿಂದ ಸಂಗೀತ ರಸಮಂಜರಿ, ಸಂಘದ ಇತಿಹಾಸದ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು. ಜಯಂತ್ ಪಕ್ಕಳ ಸ್ವಾಗತಿಸಿ, ಸಮ್ಮಾನಿತರ ಪರಿಚಯವನ್ನು ಪ್ರವೀಣ್ ಶೆಟ್ಟಿ ಕಣಂಜಾರ್ ಹಾಗೂ ವಿಜಯ್ ಶೆಟ್ಟಿ ಕುತ್ತೆತ್ತೂರು ವಾಚಿಸಿದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಪ್ರಾದೇಶಿಕ ಸಮಿತಿಯ ನಿರ್ಗಮನ ಪದಾಧಿಕಾರಿಗಳ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ತನ್ನ ಸಮಾಜ ಸೇವೆಯ ಸ್ಫೂರ್ತಿಗೆ ಕಾರಣರಾದ ಕರ್ನಿರೆ ದಿ| ಶ್ರೀಧರ ಶೆಟ್ಟಿಯವರಿಗೆ ಕೃತಜ್ಞನಾಗಿದ್ದೇನೆ. ಬಂಟರ ಸಂಘದಲ್ಲಿ ಸಕ್ರಿಯನಾಗಿ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಹಾಗೂ ಗುರುತರವಾದ ಜವಾಬ್ದಾರಿಯನ್ನು ನಿರ್ವಸುವಲ್ಲಿ ಯಶಸ್ವಿಯಾಗಿದ್ದೇನೆ. ನಾವೆಲ್ಲ ಒಮ್ಮತದಿಂದ ಬೆಳೆಯಬೇಕು. ಪದವಿ ನಮ್ಮನ್ನು ಹುಡುಕಿಕೊಂಡು ಬರಬೇಕು. ಬಂಟರ ಸಂಘ ನನ್ನ ಕೆಲಸ ಕಾರ್ಯಗಳನ್ನು ಮೆಚ್ಚಿ ಹೆಚ್ಚಿನ ಜವಾಬ್ದಾರಿ ನೀಡಿದೆ. ಸಮನ್ವಯಕನಾಗಿ ನನ್ನಿಂದಾದ ಸೇವೆ ನೀಡುವಲ್ಲಿ ನಾನು ಎಲ್ಲರೊಡನೆ ಬೆರೆತು ಮುಂದುವರಿಯುವೆ. ಪ್ರಾದೇಶಿಕ ಸಮಿತಿಯ ನೂತನ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳು. -ಶಶಿಧರ್ ಕೆ. ಶೆಟ್ಟಿ , ಇನ್ನಂಜೆ ಸಮನ್ವಯಕರು, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ
ದೊಡ್ಡ ಜವಾಬ್ದಾರಿ ಹೊತ್ತಿದ್ದೇನೆ, ಪ್ರಾದೇಶಿಕ ಸಮಿತಿಯಲ್ಲಿ ಹಿರಿಯ-ಕಿರಿಯರೊಂದಿಗೆ ಸೇರಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವಲ್ಲಿ, ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಿ ಜನರ ಆಕಾಂಕ್ಷೆಗಳಿಗೆ ಸ್ಪಂದಿಸುತ್ತೇನೆ. ಎಲ್ಲ ವಿಷಯಗಳಿಗೂ ಸಂಘದ ನಿಯಮಾವಳಿಗಳ ಪ್ರಕಾರ ಆದ್ಯತೆ ನೀಡುತ್ತೇನೆ. ಎಲ್ಲರ ಸಹಕಾರ ನನಗೆ ಅಗತ್ಯ. ಬಹು ದೊಡ್ಡ ಜವಾಬ್ದಾರಿಯಲ್ಲಿ ನಮ್ಮ ಸಮಾಜದ ಮನೆ ಮನೆಗೂ ಮುಂದಾಗಲಿರುವ ಸಮಾಜದ ಕೆಲಸ ಕಾರ್ಯಗಳ ಬಗ್ಗೆ ವಿವರ ನೀಡುವಲ್ಲಿ ಉತ್ಸುಕನಾಗಿದ್ದೇನೆ.-ಹರೀಶ್ ಪಾಂಡು ಶೆಟ್ಟಿ ನೂತನ ಕಾರ್ಯಾಧ್ಯಕ್ಷರು, ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿ
ವರದಿ: ವೈ. ಟಿ. ಶೆಟ್ಟಿ ಹೆಜಮಾಡಿ